
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಕಚೇರಿಗೆ ಬಂದಿದ್ದ ಬೆದರಿಕೆ ಪತ್ರವನ್ನು ಸ್ಥಳೀಯ ಅಂಚೆ ಪೆಟ್ಟಿಗೆಯಿಂದಲೇ ಪೋಸ್ಟ್ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸಿ.ಟಿ.ರವಿ ಅವರ ನಿವಾಸದಲ್ಲಿನ ಕಚೇರಿಗೆ ಜ.11ರಂದು ಪತ್ರವೊಂದು ಬಂದಿತ್ತು. ‘ಬೆಳಗಾವಿಯಿಂದ ಚಿಕ್ಕಮಗಳೂರಿಗೆ ನಿನ್ನನ್ನು ಹುಡುಕಿಕೊಂಡು ಬಂದಿದ್ದೇವೆ. 15 ದಿನದೊಳಗೆ ಮನೆಗೆ ನುಗ್ಗಿ ಕೈ-ಕಾಲು ಮುರಿಯುತ್ತೇವೆ. ಮಗನ ಜೀವಕ್ಕೂ ಅಪಾಯವಿದೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಸಿ.ಟಿ.ರವಿ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿರುವ ಪೊಲೀಸರು, ನಗರದ ವಿಜಯಪುರ ಬಡಾವಣೆಯಲ್ಲಿನ ಅಂಚೆ ಪೆಟ್ಟಿಗೆಯಿಂದ ಪೋಸ್ಟ್ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.




