ಮಂಗಳೂರು: ಕಂಬಳದ ಸಮಯ ವ್ಯಯವಾಗದಂತೆ ತಡೆಯಲು ಮತ್ತು ನಿಖರ ಫಲಿತಾಂಶ ನೀಡಲು ಪ್ರಥಮ ಬಾರಿಗೆ ಕಂಬಳ ಕ್ರೀಡೆಗೆ ಸ್ವಯಂ ಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೋ ಫಿನಿಶ್ ಫಲಿತಾಂಶ ಅಳವಡಿಸಲು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ.
![ಕಂಬಳ ಕ್ರೀಡೆಗೆ ಸ್ವಯಂ ಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೋ ಫಿನಿಶ್ ಫಲಿತಾಂಶ ಅಳವಡಿಸಲು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ.](https://i0.wp.com/veekshakavani.com/wp-content/uploads/2024/02/ಜಿಲ್ಲಾ-ಕಂಬಳ-ಸಮಿತಿ.jpg?resize=640%2C400&ssl=1)
ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರು, ಫೆ. 3ರಂದು ನಡೆಯುವ ಐಕಳ ಬಾವ ಕಂಬಳದಲ್ಲಿ ಪ್ರಾಯೋಗಿಕವಾಗಿ ಇದು ಅನ್ವಯವಾಗಲಿದೆ. ಕ್ರಮೇಣ ಇದನ್ನು ಎಲ್ಲ ಕಂಬಳಗಳಿಗೂ ಅಳವಡಿಸಿ 2ದಿನ ನಡೆಯುತ್ತಿರುವ ಕಂಬಳವನ್ನು 30 ಗಂಟೆಗೆ ಸೀಮಿತಗೊಳಿಸಲಾಗುವುದು ಎಂದರು.
![ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ](https://i0.wp.com/veekshakavani.com/wp-content/uploads/2024/02/ಪತ್ರಿಕಾ-ಗೋಷ್ಠಿ.jpg?resize=640%2C400&ssl=1)
ಈ ತಂತ್ರಜ್ಞಾನ ಅಳವಡಿಕೆಗೆ ಅದಾನಿ ಫೌಂಡೇಶನ್ 10 ಲಕ್ಷ ರೂಪಾಯಿ ನೀಡಿದೆ. ಕಂಬಳ ಭವನ ನಿರ್ಮಾಣ ಸೇರಿದಂತೆ ಪೂರಕ ಕೆಲಸಗಳಿಗೆ ಸಂಬಂಧಿಸಿ ಪಿಲಿಕುಳದಲ್ಲಿ 2 ಎಕ್ರೆ ಜಾಗ ಮೀಸಲಿಡುವಂತೆ ಮತ್ತು ಪಿಲಿಕುಳದಲ್ಲಿ ಕಂಬಳ ಆಯೋಜನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಚೆಕ್ ಅನ್ನು ಸಮಿತಿಗೆ ಅದಾನಿ ಸಮೂಹ ಸಂಸ್ಥೆಯ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷರಾದ ರೋಹಿತ್ ಹೆಗ್ಡೆ ಎರ್ಮಾಳು, ಮಾಜಿ ಅಧ್ಯಕ್ಷರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಲೋಕೇಶ್ ಶೆಟ್ಟಿ, ಕೋಶಾಧಿಕಾರಿಯಾದ ಚಂದ್ರಹಾಸ್ ಸನಿಲ್, ತೀರ್ಪುಗಾರರ ಸಂಚಾಲಕರಾದ ವಿಜಯ ಕುಮಾರ್ ಕಂಗಿನಮನೆ, ಕೋಣಗಳ ಯಜಮಾನರಾದ ಶ್ರೀಕಾಂತ್ ಭಟ್, ಕಂಬಳ ವ್ಯವಸ್ಥಾಪಕರಾದ ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು.
ನಿರ್ವಹಣೆ: ನಿಗದಿಪಡಿಸಿದ ಅವಧಿಯೊಳಗೆ ಕೋಣ ಬಿಡದಿದ್ದರೆ ಗೇಟ್ ಬೀಳುತ್ತದೆ. ಇದಾದ 100 ಸೆಕೆಂಡಿನಿಂದ 10 ಸೆಕೆಂಡ್ವರೆಗೆ ಕೆಂಪು ದೀಪ, 10ರಿಂದ 1 ಸೆಕೆಂಡ್ ವರೆಗೆ ಹಳದಿ ದೀಪ ಬೆಳಗುತ್ತದೆ. 0 ಬಂದಾಕ್ಷಣ ಹಸಿರು ದೀಪ ಬೆಳಗಿ ಓಟಕ್ಕೆ ಗ್ರೀನ್ ಸಿಗ್ನಲ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣ ಓಟ ಆರಂಭಿಸಬೇಕು. ಇಲ್ಲದಿದ್ದಲ್ಲಿ ಆ ಕೋಣ ಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು. ಸ್ಪರ್ಧೆಯಲ್ಲಿರುವ ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ಫೋಟೋ ಫಿನಿಶಿಂಗ್ ತಂತ್ರಜ್ಞಾನ ನೀಡಲಿದೆ.