ಉಪ್ಪಳ: ಹತ್ತು ವರ್ಷಗಳಿಂದ ಶೋಚನೀಯವಸ್ಥೆಗೆ ತಲುಪಿದ ರಸ್ತೆಯನ್ನು ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿರುವುದಾಗಿ ಆರೋಪಿಸಲಾಗಿದೆ.


ಪೈವಳಿಕೆ ಪಂಚಾಯತ್ನ 2ನೇ ವಾರ್ಡ್ ಕೊಮ್ಮಂಗಳ-ಚಿಪ್ಪಾರು ಪೆರ್ಲ ರಸ್ತೆ ಶೋಚನೀಯವಸ್ಥೆಯಲ್ಲಿದೆ. ಸುಮಾರು ಮೂರು ಕಿಲೋ ಮೀಟರ್ ಉದ್ದವಿರುವ ಈ ರಸ್ತೆಗೆ ಎರಡು ಭಾರಿ ನೂರು, ನೂರು ಮೀಟರ್ ಡಾಮರೀಕರಣಗೊಳಿಸಲಾಗಿದೆ. ಉಳಿದ ಮಣ್ಣಿನ ರಸ್ತೆಶೋಚನೀಯವಸ್ಥೆಯಲ್ಲಿರುವಂತೆಯೇ ಡಾಮಾರೀಕರಣಗೊಳಿಸಿದ ರಸ್ತೆ ಪೂರ್ತಿ ಡಾಮಾರು ಕಿತ್ತೋಗಿ ಜಲ್ಲಿಕಲ್ಲು ಎದ್ದು ವಾಹನ ಸಂಚಾರ ಸಹಿತ ಜನರಿಗೆ ನಡೆದಾಡಲು ಸಮಸ್ಯೆಯಾಗಿರುವುದಾಗಿ ಊರವರು ಆರೋಪಿಸಿದ್ದಾರೆ.
ರಸ್ತೆಯನ್ನು ದುರಸ್ಥಿಗೊಳಿಸಬೇಕೆಂದು ಊರವರು ಹಲವು ವರ್ಷಗಳಿಂದ ಪ್ರತೀ ಗ್ರಾಮ ಸಭೆಯಲ್ಲಿ ಮನವಿಯನ್ನು ನೀಡುತ್ತಾ ಬಂದಿರುವುದಾಗಿಯೂ ಆದರೆ ಇದುವರೆಗೂ ಅಧಿಕಾರಿಗಳು ದುರಸ್ಥಿಗೆ ಮುತುವರ್ಜಿ ವಹಿಸಿಲ್ಲವೆಂದು ಊರವರು ದೂರಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ಥಿಗೆ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.




