ಲಾಯಿಲದಲ್ಲಿ ನಿರ್ಮಾಣಗೊಂಡಿದೆ ಚಿತ್ಪಾವನ ಯೋಜನೆ

Share with

ಬೆಳ್ತಂಗಡಿ: ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಸ್ಯಗಳ ಪಾತ್ರ ದೊಡ್ಡದು. ಸಸ್ಯಗಳು ಬಹುಪಯೋಗಿ ಆಗಿದ್ದು ಎಲೆ, ಪುಷ್ಪ, ಹಣ್ಣು, ಸಮಿಧೆ ಮುಂತಾದ ರೂಪದಲ್ಲಿ, ವಾಯನ, ದಾನ, ಅಡುಗೆಯ ಭಾಗವಾಗಿ ಉಪಯೋಗಿಸಲ್ಪಡುತ್ತವೆ. ಈ ತರುರಾಶಿಗಳ ಅಧ್ಯಯನ, ಸಂಚಯನ ಹಾಗೂ ಸಂರಕ್ಷಣೆಯ ಅನಿವಾರ್ಯತೆಯಿದೆ. ಈ ಉದ್ದೇಶದಿಂದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗವು ಸಂಸ್ಕೃತಿ ರಕ್ಷಣೆಯ ಒಂದು ಭಾಗವಾಗಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಚಿತ್ಪಾವನ (ಚಿತ್-ಅರಿವು, ಪಾ-ರಕ್ಷಣೆ, ವನ-ಅರಣ್ಯ) ಎಂಬ ಬಹುಸ್ತರೀಯ, ಸಾಂದ್ರವೃಕ್ಷಾರೋಪಣ ಮಾದರಿಯನ್ನು ಅಳವಡಿಸಿಕೊಂಡಿರುವ ಅರಣ್ಯೀಕರಣ ಯೋಜನೆಯನ್ನು ಸಾಕಾರಗೊಳಿಸಿದೆ.

ಉಜಿರೆಯಲ್ಲಿ ಸಸ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಆಗಿರುವ ಹಾಗೂ ಬಳಗದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಗಣೇಶ್‌ ಶೆಂಡ್ಯೆ ಅವರ ಪರಿಕಲ್ಪನೆಯ ಚಿತ್ಪಾವನವು ಬೆಳ್ತಂಗಡಿ ಪೇಟೆ ಸನಿಹದ ಲಾಯಿಲ ಗ್ರಾಮದ ಬಜಕ್ಕಿರೆ ಸಾಲು ಯೋಗೀಶ್‌ ಭಿಡೆ ಅವರ ಜಾಗದಲ್ಲಿ ಸಾಕಾರಗೊಂಡಿದೆ. ಇಲ್ಲಿ ನೆಟ್ಟಿರುವ ಎಲ್ಲಾ ಸಸ್ಯಗಳು ನಮ್ಮ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸುವಂತಹದ್ದಾಗಿವೆ. ವೇದಗಳಲ್ಲಿ ಏನೆಲ್ಲಾ ಪ್ರಬೇಧಗಳ ಉಲ್ಲೇಖವಿದೆಯೋ ಸಾಧ್ಯವಾದಷ್ಟನ್ನು ಇಲ್ಲಿ ತಂದು ಪೋಷಿಸುವ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಇದಕ್ಕೆ ವೇದವನ ಎಂದೂ ಕರೆಯಬಹುದು ಎಂದು ಗಣೇಶ ಶೆಂಡ್ಯೆ ಹೇಳುತ್ತಾರೆ.

ಇಂತಹ ವೈಶಿಷ್ಟ್ಯಪೂರ್ಣ ಕಾರ್ಯ ಮಾಡಲು ಅಪಾರ ತಯಾರಿ, ತಾಳ್ಮೆ, ವಿಷಯ ಸಂಗ್ರಹ, ಮಾಹಿತಿ ಬೇಕು. ಶೆಂಡ್ಯೆ ಅವರು ತಮ್ಮ ಕಲ್ಪನೆಯನ್ನು ಬಳಗದ ಮುಂದಿಟ್ಟಾಗ ಎಲ್ಲರೂ ಒಕ್ಕೂರಲಿನಿಂದ ಇದನ್ನು ಮಾಡಲೇಬೇಕು ಎಂದು ಸಮ್ಮತಿಸಿದರು. ಪೂರಕವಾಗಿ ಇದಕ್ಕೆ ಬೇಕಾಗುವ ಸುಮಾರು ೧೦ ಸೆಂಟ್ಸ್‌ ತಮ್ಮದೇ ಜಾಗವನ್ನು ಬಳಗದ ಅಧ್ಯಕ್ಷ ಯೋಗೀಶ ಭಿಡೆಯವರು ಒದಗಿಸಿಕೊಟ್ಟರು. ಸುಮಾರು ೫೦,೦೦೦ ವೆಚ್ಚದಲ್ಲಿ ಚಿತ್ಪಾವನ ನಿರ್ಮಾಣಗೊಂಡಿತು. ೨.೫ ಅಡಿ ಅಂತರದಲ್ಲಿ ೧೨೬ ಪ್ರಭೇದಗಳ ಸುಮಾರು 450 ಗಿಡಗಳನ್ನು ನೆಡಲಾಗಿದೆ. ಎಲೆ, ಪುಷ್ಪ, ಹಣ್ಣು, ಸಮಿಧೆಗಳ ಉದ್ಯಾನವನ ಇದಾಗಿದ್ದು ಅಳಿವಿನಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆಯೊಂದಿಗೆ ಅಧ್ಯಯನಕ್ಕೂ ಅವಕಾಶವಿದೆ. ಆ. ೧೯ ರಂದು ವೇದಮೂರ್ತಿ ನಾರಾಯಣ ಗೋಖಲೆಯವರು ವನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ನೀರಿನ ಸರಬರಾಜು, ಅದಕ್ಕೆ ಬೇಕಾದ ಪೋಷಕಾಂಶಗಳ ವ್ಯವಸ್ಥೆಯನ್ನು, ಆರೈಕೆಯನ್ನು ಭಿಡೆಯವರು ಆಸಕ್ತಿಯಿಂದ ನಿರ್ವಹಿಸುತ್ತಾ ಬರುತ್ತಿದ್ದಾರೆ.
ಇಂತಹ ಯೋಜನೆ ಮತ್ತು ಯೋಚನೆಯನ್ನು ಪ್ರತಿ ದೇವಸ್ಥಾನ, ದೈವಸ್ಥಾನಗಳಲ್ಲಿ ಮಾಡಿದರೆ ಉಪಯೋಗ. ನಮ್ಮ ಸಂಸ್ಕೃತಿಯ ಹಂದರದಲ್ಲಿ ಪ್ರಕೃತಿ ತತ್ವಗಳನ್ನು ಅನಾವರಣಗೊಳಿಸುವ ಒಂದು ಕಾರ್ಯವಾಗಿ ಈ ತರಹದ ವನ ವಿನ್ಯಾಸಗಳನ್ನು ಮತ್ತೆ ಮುನ್ನೆಲೆಗೆ ತರಬೇಕೆಂಬ ಉದ್ದೇಶ ನಮ್ಮದು. ಇಲ್ಲವಾದಲ್ಲಿ ಅವುಗಳು ಪುಸ್ತಕಕಕ್ಕೋ, ಗೂಗಲ್‌ಗಷ್ಟೇ ಸೀಮತವಾಗುತ್ತವೆ. ಪರಸ್ಪರ ಸಹಕಾರ ತತ್ವದಿಂದ ಎಲ್ಲರೂ ಇಂತಹ ಯೋಚನೆಗೆ ಅದರಲ್ಲೂ ಯುವಕರು ಕೈಜೋಡಿಸುವ ಅಗತ್ಯವಿದೆ ಎನ್ನುತ್ತಾರೆ ಗಣೇಶ್‌ ಶೆಂಡ್ಯೆ.

ಚಿತ್ಪಾವನ-ವೇದವನದಲ್ಲಿ ಪೋಷಣೆಯಾಗುತ್ತಿರುವ ಎಲ್ಲಾ ಸಸ್ಯಗಳಿಗೂ ಕ್ಯೂಆರ್‌ಕೋಡ್‌ ನೀಡಲಾಗಿದೆ. ಅದರ ಮೂಲಕ ಬೆಳೆಯುತ್ತಿರುವ ಸಸ್ಯದ ಉಪಯೋಗವನ್ನೊಳಗೊಂಡಂತೆ ಎಲ್ಲಾ ಮಾಹಿತಿಗಳನ್ನು ಭೇಟಿ ನೀಡುವವರು ಪಡೆದುಕೊಳ್ಳಬಹುದಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸಂಸ್ಕೃತಿ ರಕ್ಷಣೆಯ ಅರಣ್ಯದಲ್ಲಿ ಸಂರಕ್ಷಿಸಲ್ಪಡುವ ಸಸ್ಯಗಳು:
ಅಗರು, ಅಗಸೆ, ಅಡಿಕೆ, ಅತ್ತಿ, ಅಡ್ಕಬಾಳೆ, ಅವರೆ, ಅರಸಿನ, ಅರ್ಜುನ, ಅಶೋಕ, ಅಶ್ವತ್ಥ, ಅಳಲೆ, ಆನೆಮುಂಗು, ಆಲ,ಉತ್ತರಣೆ, ಉದ್ದು, ಎಕ್ಕಮಾಲೆ, ಎಳ್ಳು, ಏಲಕ್ಕಿ, ಉಯ್ಯೇರ್‌, ಕಂಚುಹುಳಿ, ಕಚೂರಗಂಧ, ಕಡ್ಲೇಗಿಡ, ಕದಂಗ, ಕಬ್ಬು, ಕಮಲ, ಕರವೀರ, ಕಲ್ಲಾರ, ಕಹಿಬೇವು, ಕಾಮಕಸ್ತೂರಿ, ಕಾಸರಕ, ಕಾಳುಮೆಣಸು, ಕಿತ್ತಳೆ, ಕಿನ್ನಿಗೋಳಿ, ಕುಂಬಳಕಾಯಿ, ಲಿಂಗತೊಂಡೆ, ಕೇದಗೆ, ಕೇಪಳ ಹೂವು, ಕೊಟ್ಟೆ ಹಣ್ಣು, ಕದಿರ, ಗಟ್ಟದತುಂಬೆ, ಗಿರಿಕರ್ಣಿಕ, ಶಂಖಪುಷ್ಪ, ಗುಲಾಬಿ, ಗೆಣಸು, ಗೇರುಬೀಜ, ಗೋದಿ, ಗೋರಟೆ, ಗೋಸಂಪಿಗೆ, ಚಕೋತ, ಜಂಬುನೇರಳೆ, ಜಾಜಿಮಲ್ಲಿಗೆ, ಜಾಯಿಕಾಯಿ ಮತ್ತು ಪತ್ರೆ, ಜೀರಿಗೆ, ಜೊಂಡು ಹುಲ್ಲು, ತಮಾಲ ಹೊಂಗೆ, ತುಂಬೇಗಿಡ, ತುಳಸಿ, ತೆಂಗು, ತಿಲ್‌ಫುಲ್ಲ, ತ್ರಿಗುಣಾತ್ಮಕ, ತೊಗರಿ, ದರ್ಬೆ, ದಡ್ಡಾಲ, ದಾಸವಾಳ, ದಾಳಿಂಬೆ, ದುಂಡುಮಲ್ಲಿಗೆ, ದೂರ್ವೆ, ಉಮ್ಮತ್ತಿ, ನಂದಿಬಟ್ಟಲು, ನಾಗಸಂಪಿಗೆ, ನಾಣೀಲು, ನಾಮದಬೇರು, ನಿತ್ಯಮಲ್ಲಿಗೆ, ನೆಲ್ಲಿ, ನೇರಳೆ, ಪಡುವಲ, ಪಲಾಶ, ಪಾದರಿ, ಪಾರಿಜಾತ, ಪುನ್ನಾಗ, ಬಕುಲ, ಕದಳಿ, ಬಿದಿರು, ಬಿಲ್ವ, ಬಿಳಿಕಡ್ವಿ, ಬೀಟೆ, ಬೇಲ, ಬೋರೆಹಣ್ಣು, ಭತ್ತ, ಭೃಂಗರಾಜ, ಮದನಪತ್ರ, ಮಂದಾರ, ಮಲ್ಲಿಗೆ, ಮಾಚಿಪತ್ರೆ, ಮಾದಿಫಲ, ಮಾವು, ಮುಳ್ಳುಸೌತೆ, ಮುತ್ತುಮಲ್ಲಿಗೆ, ಮೆಣಸಿನಕಾಯಿ, ಮೈಸೂರು ಗೋರಟೆ, ಜವೆಗೋಧಿ, ಯೂಥಿಕಾ, ರಕ್ತಚಂದನ, ರತ್ನಮಲ್ಲಿಗೆ, ಲವಂಗ, ಲಾವಂಚ, ಲಾವುದ ಮರ, ಲಿಂಬೆ, ಲಿಲ್ಲಿಹೂವು, ವಿಷ್ಣುಕ್ರಾಂತಿ, ವೀಳ್ಯದೆಲೆ, ಶಮಿ, ಶುಂಠಿ, ಶ್ರೀಗಂಧ, ಸಂಪಿಗೆ, ಸಪ್ತಪರ್ಣಿ, ಸಾಮೆಅಕ್ಕಿ, ಸಾಸಿವೆ(ಕಪ್ಪು ಮತ್ತು ಬಿಳಿ), ಸುರುಳಿ,ಸುರಗೆ, ಸೇವಂತಿಗೆ, ಸೋರೆಕಾಯಿ, ಹತ್ತಿ, ಹಲಸು, ಹಿಪ್ಪಲಿ, ಹುರುಳಿ, ಹೆಸರು.


Share with

Leave a Reply

Your email address will not be published. Required fields are marked *