![ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ.](https://i0.wp.com/veekshakavani.com/wp-content/uploads/2023/10/ಮರ-ಬಿದ್ದು-ಕಾರ್ಮಿಕ-ಸಾವು.jpg?resize=640%2C400&ssl=1)
ಉಡುಪಿ: ನಾಗಬನ ಮತ್ತು ಮನೆ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ಬಿಹಾರ–ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತಪಟ್ಟಿದ್ದು, ಗಾಯಾಳುಗಳ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಖಾಸಗಿಯವರಿಗೆ ಸೇರಿದ ನಾಗಬನವೊಂದರ ಮೇಲೆ ವಾಲಿದ್ದ ಬೃಹತ್ ಗೋಳಿಮರವನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿದ್ದು, ಇದರಿಂದಾಗಿ ಮೂವರು ಕಾರ್ಮಿಕರು ಮರದಡಿಗೆ ಸಿಲುಕಿಕೊಂಡಿದ್ದು, ಓರ್ವ ಮರದಡಿ ಸಿಲುಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಬ್ಬರನ್ನು ರಕ್ಷಿಸಿ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ . ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್.ಐ.ಅಬ್ದುಲ್ ಖಾದರ್, ಕ್ರೈಂ ಎಸ್.ಐ.ಪುರುಷೋತ್ತಮ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಮರ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.