![](https://i0.wp.com/veekshakavani.com/wp-content/uploads/2023/09/ಮಂಗಳೂರು-ವಿಶ್ವವಿದ್ಯಾನಿಲಯದ-ಮಂಗಳಾ-ಸಭಾಂಗಣದಲ್ಲಿ-ಗಣೇಶೋತ್ಸವ-ಆಚರಣೆ.jpg?resize=640%2C400&ssl=1)
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಆಚರಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಜಯರಾಜ್ ಅಮೀನ್ ಅವರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಪ್ರತಿಷ್ಠಾಪನೆ ಸಂದರ್ಭದಲ್ಲಿ ವಿವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.
ನಂತರ ಅರ್ಚಕರ ಸಮ್ಮುಖದಲ್ಲಿ ಪಂಚೆ ಹಾಗೂ ಶಾಲು ತೊಟ್ಟು ಉಪಕುಲಪತಿ ಅವರು ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲಿ ಮಂಗಳೂರು ನಗರ ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದ್ದು, ವಿವಿ ಸುತ್ತಮುತ್ತ ಕೂಡ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಆರ್.ಎಸ್.ಎಸ್ ಮುಖಂಡರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಶಾಸಕ ಡಾ|ಭರತ್ ಶೆಟ್ಟಿ ಅವರು ಪೂಜೆಯನ್ನು ಸಲ್ಲಿಸಿದರು. ಮಹಾ ಪೂಜೆ ಬಳಿಕ ಬಿಜೆಪಿ ಮತ್ತು ಹಿಂದೂ ಮುಖಂಡರು ಹಾಗೂ ಇತರರು ಪ್ರಸಾದವನ್ನು ಸ್ವೀಕರಿಸಿದರು.