![ಕೆಮಿಕಲ್ ಕಂಪೆನಿಯ ಮಳಿಗೆ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದರು.](https://i0.wp.com/veekshakavani.com/wp-content/uploads/2023/10/ಕೃಷಿ-ಅಧಿಕಾರಿಗಳ-ದಾಳಿ.jpg?resize=640%2C400&ssl=1)
ಮಂಗಳೂರು: ಅನಧಿಕೃತ ಕೃಷಿ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಮುಲ್ಕಿ ಹೋಬಳಿಯ ಕಾರ್ನಾಡು ಗ್ರಾಮದ ಸನ್ ಕೆಮಿಕಲ್ ಕಂಪೆನಿಯ ಮಳಿಗೆ ಮೇಲೆ ಇತ್ತೀಚೆಗೆ ಕೃಷಿ ಜಾರಿದಳದ ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕರಾದ ನಾಗರಾಜ್ ರೆಡ್ಡಿ, ಮಂಗಳೂರು ತಾಲೂಕು ಹಾಗೂ ಜಾರಿದಳ ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್, ಮೈಸೂರು ವಿಭಾಗದ ಕೃಷಿ ಅಧಿಕಾರಿಯಾದ ದಿವಾಕರ್ ಹಾಗೂ ಷಣ್ಮುಖ ಅವರ ನೇತೃತ್ವದ ತಂಡ ದಾಳಿ ನಡೆಸಿ 1.19 ಲಕ್ಷ ರೂಪಾಯಿ ಮೌಲ್ಯದ ಕಾಪರ್ ಸಲ್ಫೆಡ್ ಮತ್ತು ಮೈಲುತುತ್ತು ಕೀಟನಾಶಕಗಳನ್ನು ವಶಪಡಿಸಿಕೊಂಡಿದೆ.
ಕೃಷಿ ಜಾರಿದಳ ಹಾಗೂ ಎಲ್ಲ ತಾಲೂಕಿನ ಗುಣ ನಿಯಂತ್ರಣ ಪರಿವೀಕ್ಷಕರ ದಳವು ಅನಧಿಕೃತವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.