ಉಪ್ಪಿನಂಗಡಿ: ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಹೋಗುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯ ಗೃಹ ರಕ್ಷಕ ದಳದ ಪ್ರವಾಹ ರಕ್ಷಣ ತಂಡ ಪ್ರಯಾಸದಿಂದ ರಕ್ಷಣೆ ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮೊಗ್ರು ಗ್ರಾಮದ ಪುಂಡುಪಿಲದಲ್ಲಿ ತೋಡಿಗೆ ಬಿದ್ದ ದನವೊಂದು ನೆರೆ ನೀರಿನಲ್ಲಿ ಕೊಚ್ಚಿಕೊಂಡು ನೇತ್ರಾವತಿ ನದಿಗೆ ಸೇರಿತ್ತು. ಹಳೆಗೇಟು ಬಳಿಯ ದಡ್ಡು ಎಂಬಲ್ಲಿ ಇದನ್ನು ಕಂಡ ಚಂದಪ್ಪ ಅವರು ಪ್ರವಾಹ ರಕ್ಷಣ ತಂಡಕ್ಕೆ ಮಾಹಿತಿಯನ್ನು ನೀಡಿದರು. ತಕ್ಷಣವೇ ಕಾರ್ಯಪ್ರವೃತರಾದ ಪ್ರವಾಹ ರಕ್ಷಣ ತಂಡ ರಬ್ಬರ್ ದೋಣಿಯ ಮೂಲಕ ಕಾರ್ಯಾಚರಣೆಯನ್ನು ನಡೆಸಿ, ದನವನ್ನು ರಕ್ಷಿಸಿ ದಡಕ್ಕೆ ತಂದು ಕಟ್ಟಿ ಹಾಕಿದರು. ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾದ ದಿನೇಶ್ ಬಿ. ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯಾಚರಣೆಯು ನಡೆಯಿತು.