ರಾಯರ ಸನ್ನಿಧಾನದಲ್ಲಿ ನೀಡುವ ಮಂತ್ರಾಕ್ಷತೆಯ ಮಹಿಮೆ, ಪವಾಡವೇನು ಗೊತ್ತೇ.?

Share with

ರಾಘವೇಂದ್ರ ಸ್ವಾಮಿಗಳನ್ನು ಕಲಿಯುಗದ ಪ್ರತ್ಯಕ್ಷ ದೇವರೆಂದು ಕರೆಯುತ್ತೇವೆ. ಬೇಡಿದವರ ಇಷ್ಟಾರ್ಥಗಳನ್ನು ಈಡೇರಿಸಿ, ಸಂಕಷ್ಟಗಳನ್ನು ದೂರ ಮಾಡುವವರೇ ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳು. ರಾಘವೇಂದ್ರ ಸ್ವಾಮಿಗಳ ಮಹಿಮೆ ಹೇಗಿದೆಯೆಂದರೆ ಇಂದಿಗೂ ಜನರು ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಶ್ರೀ ಮಂಚಾಲೆ ರಾಘಪ್ಪ ಎನ್ನುವ ನಾಣ್ಣುಡಿಯಿದೆ. ಎಲ್ಲರನ್ನೂ ಪವಾಡ ಪುರುಷರೂ ಎಂದು ಕರೆಯಲು ಸಾಧ್ಯವಿಲ್ಲ, ಯಾರು ದೈವೀ ರೂಪದಲ್ಲಿ ಬಂದು ಜನರ ಸಂಕಷ್ಟಗಳನ್ನು ಪರಿಹರಿಸಿ ಬ್ರಹ್ಮಾಂಡದ ಕಲ್ಯಾಣವನ್ನು ಅಪೇಕ್ಷಿಸುತ್ತಾರೋ ಅವರನ್ನು ನಾವು ಪವಾಡ ಪುರುಷರು, ಮಹಾಮಹಿಮರು ಎಂದು ಕರೆಯುತ್ತೇವೆ. ರಾಘವೇಂದ್ರ ಸ್ವಾಮಿಗಳು ಅಕ್ಷರಶಃ ದೈವಾಂಶ ಸಂಭೂತರು. ರಾಘವೇಂದ್ರ ಸ್ವಾಮಿಗಳು ನೆಲೆನಿಂತ ಮಂತ್ರಾಲಯದಲ್ಲಿ ಹಾಗೂ ಇತರೆ ರಾಯರ ಮಠಗಳಲ್ಲಿ ನೀಡುವ ಮಂತ್ರಾಕ್ಷತೆಗೆ ಎಷ್ಟೊಂದು ಶಕ್ತಿಯಿದೆ ನೋಡಿ..

1. ಮಂತ್ರಾಕ್ಷತೆಗೆ ಅಪಮಾನ ಮಾಡದಿರಿ:

ಮಂತ್ರಾಲಯಕ್ಕೆ ಹೋದಾಗ ನಮಗೆ ಮಂತ್ರಾಕ್ಷತೆಯನ್ನು ನೀಡುತ್ತಾರೆ. ಅದನ್ನು ತಲೆಯ ಮೇಲೆ ಹಾಕಿಕೊಂಡ ತಕ್ಷಣ ಕೆಳಗೆ ಬೀಳುತ್ತದೆ. ಇದರರ್ಥ ನೀವು ಅದನ್ನು ತಪ್ಪಾಗಿ ತಲೆಯ ಮೇಲೆ ಹಾಕಿಕೊಂಡಿದ್ದೀರಿ ಎಂಬುದಾಗಿದೆ. ರಾಯರ ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿಕೊಳ್ಳಲು ಅದರದ್ದೇ ಆದ ನಿಯಮವಿದೆ. ಮಂತ್ರಾಕ್ಷತೆಯನ್ನು ತಪ್ಪಾದ ರೀತಿಯಲ್ಲಿ ಬಳಸಿದರೆ ಅದರಿಂದ ನಿಮಗೆ ಅಪಾಯವಾಗಬಹುದು. ಯಾಕೆಂದರೆ ನೀವು ಮಂತ್ರಾಕ್ಷತೆಗೆ ಅಪಮಾನ ಮಾಡುತ್ತಿದ್ದೀರಿ ಎಂದರೆ ಅದು ನೇರವಾಗಿ ರಾಯರಿಗೆ ಮಾಡಿದ ಅಪಮಾನವಾಗಿರುತ್ತದೆ.

2. ಉತ್ತಮ ಆರೋಗ್ಯಕ್ಕಾಗಿ ಮಂತ್ರಾಕ್ಷತೆಯಿಂದ ಹೀಗೆ ಮಾಡಿ:
ಯಾವುದೇ ರೀತಿಯಾದ ಆರೋಗ್ಯ ಸಮಸ್ಯೆಯನ್ನು ನೀವು ಹೊಂದಿದ್ದರೆ ಅದನ್ನು ದೂರ ಮಾಡುವ ಶಕ್ತಿ ರಾಯರ ಮಂತ್ರಾಕ್ಷತೆಗಿದೆ. ರಾಯರ ಮಠದಲ್ಲಿ ನೀಡಿರುವ ಮಂತ್ರಾಕ್ಷತೆಯನ್ನು ಬಿಳಿ ಬಣ್ಣದ ಬಟ್ಟೆಯಲ್ಲಿ ಇಟ್ಟು ಅದನ್ನು ನಿಮ್ಮ ದೇಹದ ಬಲಭಾಗದ ದೇಹದಲ್ಲಿ ಅಂದರೆ, ಬಲಭಾಗದ ಜೇಬು ಅಥವಾ ಪಾಕೇಟ್‌ನಲ್ಲಿ ಇಟ್ಟುಕೊಳ್ಳಬೇಕು. ನಂತರ ಶ್ರೀಗಂಧವನ್ನು ಮತ್ತು ತುಳಸಿ ದಳಗಳನ್ನು ನೀರಿಗೆ ಹಾಕಿ ಆ ನೀರನ್ನು ನಿಮ್ಮ ತಲೆಯ ಮೇಲೆ ಪ್ರೋಕ್ಷಣೆಯನ್ನು ಮಾಡಿಕೊಳ್ಳಬೇಕು. ಈ ರೀತಿ ದಿನನಿತ್ಯ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

3. ಎಷ್ಟು ಮಂತ್ರಾಕ್ಷತೆಯನ್ನು ತಲೆಯ ಮೇಲಿಟ್ಟುಕೊಳ್ಳಬೇಕು.?
ಪ್ರತಿನಿತ್ಯ ಸ್ನಾನ ಮಾಡಿದ ಬಳಿಕ ಬಿಳಿ ಬಟ್ಟೆಯಲ್ಲಿ ಇಟ್ಟುಕೊಂಡಿರುವ ಮಂತ್ರಾಕ್ಷತೆಯಲ್ಲಿ ಎರಡು ಮಂತ್ರಾಕ್ಷತೆ ಕಾಳುಗಳನ್ನು ನಿಮ್ಮ ತಲೆಯ ಮೇಲೆ ಇಟ್ಟುಕೊಳ್ಳಿ. ಮಂತ್ರಾಕ್ಷತೆಯನ್ನು ಶೇಖರಣೆ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯದು. ಈ ರೀತಿ ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿಕೊಳ್ಳುವುದರಿಂದ ರಾಘವೇಂದ್ರ ಸ್ವಾಮಿಗಳ ಶ್ರೀ ರಕ್ಷೆ ಸದಾ ನಿಮ್ಮ ಮೇಲಿರುತ್ತದೆ. ಮಂತ್ರಾಕ್ಷತೆಯನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಎಲ್ಲಾ ಕೆಲಸಗಳಲ್ಲಿ ಜಯವಾಗುವುದು.

4. ಮಂತ್ರಾಕ್ಷತೆ ಮಹತ್ವ:
ಮಂತ್ರಾಕ್ಷತೆಗೆ ನಮ್ಮ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯಿರುವುದರಿಂದ ಅದನ್ನು ಜೀವಾಮೃತವೆಂದು ಕರೆಯಲಾಗುತ್ತದೆ. ಮಂತ್ರಾಕ್ಷತೆಯೆಂದರೆ ಮಂತ್ರಸಿದ, ಮಂತ್ರ ಪರಿಪೂರಕ ಹೊಂದಿರುವ ಅಕ್ಷತೆ ಎಂದರ್ಥ. ಗುರುಗಳು ನೀಡುವ ಮಂತ್ರಾಕ್ಷತೆಯನ್ನು ಸುವರ್ಣ ಅಕ್ಷತೆಯೆಂತಲೂ ಕರೆಯಲಾಗುತ್ತದೆ. ಮಂತ್ರಾಕ್ಷತೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಕವಚದಂತೆ ಕೆಲಸ ಮಾಡುತ್ತದೆ. ಮಂತ್ರಾಕ್ಷತೆ ಗುರು – ಶಿಷ್ಯರ ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ಮಠಗಳಿಗೆ ಬಂದಿರುವ ಭಕ್ತರು ಅಂದರೆ ಶಿಷ್ಯರು ಮಂತ್ರಾಕ್ಷತೆಯಿಲ್ಲದೆ ಮಠದಿಂದ ಹೊರಗೆ ಹೋಗಲು ಬಯುಸುವುದಿಲ್ಲ.

5. ಮಂತ್ರಾಕ್ಷತೆಗೆ ಸಂಬಂಧಿಸಿದ ಕಥೆ:
ಹಿಂದೇ ಅನೇಕ ಶಿಷ್ಯರು ರಾಯರ ಬಳಿ ಜ್ಞಾನವನ್ನು ಪಡೆದುಕೊಳ್ಳಲು ಬರುತ್ತಿದ್ದರು. ಅದರಲ್ಲಿ ಒಬ್ಬ ಬಡ ವಿದ್ಯಾರ್ಥಿ ಇರುತ್ತಾನೆ. ಆತನ ಶಿಕ್ಷಣ ಮುಗಿದ ನಂತರ ಆತನ ಬಳಿ ರಾಯರಿಗೆ ನೀಡಲು ಎನೂ ಇರುವುದಿಲ್ಲ. ನೇರವಾಗಿ ರಾಯರ ಬಳಿಗೆ ಹೋಗಿ, ಗುರುಗಳೇ ನಿಮಗೆ ಏನನ್ನು ನೀಡಲು ನನ್ನ ಬಳಿ ಇಲ್ಲ. ನಾನೊಬ್ಬ ಬಡವ ಎಂದು ಹೇಳುತ್ತಾನೆ. ಆಗ ರಾಯರು ನೀನು ಅದರ ಬಗ್ಗೆ ಚಿಂತಿಸಬೇಡ. ನನಗೆ ಅದರ ಅಗತ್ಯವಿಲ್ಲವೆಂದು ತನ್ನ ಬಳಿ ಇದ್ದ ಅಕ್ಕಿಯ ಕಾಳುಗಳನ್ನು ತೆಗೆದುಕೊಂಡು ಮಂತ್ರವನ್ನು ಪಠಿಸುತ್ತಾ ಅದಕ್ಕೆ ಶಕ್ತಿಯನ್ನು ತುಂಬುತ್ತಾರೆ. ನಂತರ ಆ ಮಂತ್ರಾಕ್ಷತೆಯನ್ನು ಬಡ ವಿದ್ಯಾರ್ಥಿಗೆ ನೀಡುತ್ತಾರೆ. ಆತ ಅದನ್ನು ತೆಗೆದುಕೊಂಡು ತನ್ನ ಊರಿನ ದಾರಿಯನ್ನು ಹಿಡಿಯುತ್ತಾನೆ. ಅವನು ಊರು ತಲುಪುವುದಕ್ಕೂ ಮುನ್ನವೇ ಕತ್ತಲಾಗುತ್ತದೆ. ಆಗ ಅವನು ಅಲ್ಲೇ ಮಾರ್ಗ ಮಧ್ಯೆದಲ್ಲಿದ್ದ ಒಂದು ಪುಟ್ಟ ಮನೆಯಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತಾನೆ. ಆ ಮನೆಯ ಮಾಲೀಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು. ಆಕೆಯ ಗರ್ಭದಲ್ಲಿದ್ದ ಮಗುವನ್ನು ತಿನ್ನುವುದಕ್ಕಾಗಿ ವಿಶಾಚಿಯೊಂದು ಅಲ್ಲಿಗೆ ಬರುತ್ತದೆ. ಆಗ ರಾಯರ ಶಿಷ್ಯ ಗುರುಗಳು ನೀಡಿದ್ದ ಮಂತ್ರಾಕ್ಷತೆಯನ್ನು ಪಿಶಾಚಿಯತ್ತ ತೋರಿಸುತ್ತಾರೆ ಆಗ ಆ ಪಿಶಾಚಿ ಅಲ್ಲಿಂದ ಓಡಿ ಹೋಗುತ್ತದೆ. ಇದರಿಂದ ಆತನಿಗೆ ಆ ಕುಟುಂಬದಲ್ಲಿ ವಿಶೇಷ ಗೌರವ ಸಿಗುತ್ತದೆ.

6. ರಾಘವೇಂದ್ರ ಸ್ವಾಮಿ ಮಂತ್ರ:
ರಾಘವೇಂದ್ರ ಸ್ವಾಮಿಗೆ ಸಮರ್ಪಿತವಾದ ಈ ಅದ್ಭುತ ಮಂತ್ರವನ್ನು 10 ಬಾರಿ ಪಠಿಸಿ:
”ಶ್ರೀ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೇ”

ನೀವು ಮಂತ್ರಾಲಯಕ್ಕೆ ಹೋದಾಗ ತುಂಗಾ ಸ್ನಾನ ಮಾಡದೇ ಹಿಂದಿರುಗಿ ಬರಬೇಡಿ. ಹಾಗೂ ರಾಯರ ಮಂತ್ರಾಕ್ಷತೆಯನ್ನು ತರಲು ತಪ್ಪದೇ ಮರೆಯಬೇಡಿ. ಯಾಕೆಂದರೆ ರಾಘವೇಂದ್ರ ಸ್ವಾಮಿಯ 2 ಕಾಳು ಮಂತ್ರಾಕ್ಷತೆಗೆ ಅಷ್ಟೊಂದು ಶಕ್ತಿಯಿದೆ.


Share with

Leave a Reply

Your email address will not be published. Required fields are marked *