ಉಡುಪಿ: ಜಿಲ್ಲೆಯ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ಕಾರಿಗೆ ಡೀಸೆಲ್ ತುಂಬಿಸಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿರ್ವ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26 ವ), ಶಿರ್ವ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23 ವ), ಉಡುಪಿ ಅಂಬಾಗಿಲು ನಿವಾಸಿ ಆಶಿಲ್ (21 ವ) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಜೂ.27ರಂದು ರಾತ್ರಿ 9.10ರ ಸುಮಾರಿಗೆ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಬಂಕ್ ಗೆ ಈಕೋ ಸ್ಪೋರ್ಟ್ಸ್ನಲ್ಲಿ ಬಂದಿದ್ದ ಮೂವರು ಕಾರಿಗೆ 4711 ರೂ ಮೌಲ್ಯದ ಡೀಸೆಲ್ ತುಂಬಿಸಿದ್ದರು. ಬಂಕ್ ನಲ್ಲಿದ್ದ ಶಶಾಂಕ್ ಬಳಿ ಬಿಲ್ ನೀಡುವಂತೆ ಕೇಳಿದ್ದರು. ಆದರೆ ಶಶಾಂಕ್ ಬಿಲ್ ತೆಗೆಯುವಷ್ಟರಲ್ಲಿ ಹಣ ನೀಡದೆ ಕಾರಿನಲ್ಲಿ ಪರಾರಿಯಾಗಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಇಂತಹದೇ ಕೃತ್ಯಗಳನ್ನು ಬೇರೆ ಕಡೆಗಳಲ್ಲಿ ಎಸಗಿದ್ದಾರೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




