ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್ಮ್ಯಾಪ್ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕಲಾವತಿ ಜಯಂತ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಪಿ. ದಯಾನಂದ ಪೈ ಹಾಗೂ ಶ್ರೀ ಪಿ. ಸತೀಶ್ ಪೈ, ಪ್ರಾಂಶುಪಾಲರು, GFGC ಕಾಲೇಜು, ಮಂಗಳೂರು ಅವರು ಮಾತನಾಡಿ, “ಒಳ್ಳೆಯ ನಿರ್ಧಾರ ನಮ್ಮನ್ನು ಅರ್ಧದಷ್ಟು ಗೆಲ್ಲಿಸಿದರೆ, ಉಳಿದ ಅರ್ಧವನ್ನು ಪ್ರಯತ್ನ ಮತ್ತು ಪರಿಶ್ರಮದಿಂದ ಗೆಲ್ಲಬಹುದು” ಎಂದು ಹೇಳಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದ್ದು, ನಿರಂತರ ಕಲಿಕೆ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಯ ಮೂಲಕ ತಮ್ಮನ್ನು ತಾವು ಮತ್ತಷ್ಟು ಪ್ರಬಲರನ್ನಾಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ಸುಧಾರಣೆ, ಶೈಕ್ಷಣಿಕ ಬೆಳವಣಿಗೆ ಹಾಗೂ ಸಂಸ್ಥೆಯ ಭವಿಷ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಸವಿಸ್ತಾರವಾಗಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ. ಪಕ್ಕಳ ಅವರು ಮಾತನಾಡಿ, “ಬದುಕಿನಲ್ಲಿ ಹೊಸತನವನ್ನು ಬಯಸುವ ನಾವು ಮೊದಲು ನಮ್ಮ ಯೋಚನಾ ಕ್ರಮವನ್ನು ಬದಲಾಯಿಸಬೇಕು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಹೊಸ ವಿಚಾರಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ಷಯ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಭಿಲಾಷ್ ಕ್ಷತ್ರಿಯ ಹಾಗೂ IQAC ನಿರ್ದೇಶಕರಾದ ಶ್ರೀಮತಿ ರಶ್ಮಿ ಕೆ. ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀ ಅಮೃತ್ ರಾಜ್ ವೈ. ಆರ್. ಅವರು ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ರಶ್ಮಿ ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀ ಅವಿನಾಶ್ ವಂದನಾರ್ಪಣೆ ಸಲ್ಲಿಸಿದರು. ಕು. ಪ್ರತೀಕ್ಷ ಕಾರ್ಯಕ್ರಮವನ್ನು ನಿರೂಪಿಸಿದರು.




