ಪುತ್ತೂರು: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಉಸಿರುಕಟ್ಟಿದಂತಾಗಿ ಅಸ್ವಸ್ಥಗೊಂಡ 20 ವರ್ಷದ ಬಿ.ಕಾಂ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಸೆ.5ರಂದು ಸಂಜೆ ಪುತ್ತೂರಿನಲ್ಲಿ ನಡೆದಿದೆ.

ಮೃತರನ್ನು ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈ ಅವರ ಪುತ್ರ ಶ್ರಮಿಕ್ (20) ಎಂದು ಗುರುತಿಸಲಾಗಿದೆ. ಅವರು ಪುತ್ತೂರು ನೆಹರುನಗರದಲ್ಲಿರುವ ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿದ್ದರು.
ಬೊಳುವಾರಿನ ಜಿಮ್ ಸೆಂಟರ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಶ್ರಮಿಕ್ ಅವರಿಗೆ ಏಕಾಏಕಿ ಉಸಿರುಕಟ್ಟಿದಂತಾಗಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಬೊಳುವಾರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಶ್ರಮಿಕ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನೆಗೆ ಹೃದಯಾಘಾತವೇ ಕಾರಣವೆಂದು ಶಂಕಿಸಲಾಗಿದೆ.




