ಶಿವಮೊಗ್ಗ: ತೆರೆದ ಹೃದಯ ಚಿಕಿತ್ಸೆಯ ಹಿನ್ನೆಲೆ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಜೀರೋ ಟ್ರಾಫಿಕ್ನಲ್ಲಿ ಶಿಫ್ಟ್ ಮಾಡಲಾಯಿತು.
ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಮತ್ತು ಮೋನಿಕ ದಂಪತಿಯ ಮೂರು ದಿನಗಳ ಬೇಬಿ ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಜು.16ರಂದು ರಾತ್ರಿ 10 ಗಂಟೆಗೆ ಶಿವಮೊಗ್ಗದಿಂದ ಹೊರಟ ಆಂಬುಲೆನ್ಸ್, ಬೆಂಗಳೂರಿಗೆ ಮಧ್ಯರಾತ್ರಿ 1.20 ಕ್ಕೆ ತಲುಪಿತದೆ.
ಮಗು ಹುಟ್ಟಿದ ಮೂರು ದಿನಗಳಲ್ಲೇ ಈ ಹೆಣ್ಣು ಮಗುವಿಗೆ ಹೃದಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು ಹೃದಯ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಗುವನ್ನು ದಾಖಲು ಮಾಡಲಾಗಿತ್ತು. ತುರ್ತಾಗಿ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ.
ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ರವಾನೆ ಮಾಡಲು ಮಗುವಿನ ಪೋಷಕರ ಸ್ನೇಹಿತರ ಪ್ರಯತ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಎಸ್ ಪಿ ಮಿಥುನ್ ಕುಮಾರ್ ರನ್ನು ಸಂಪರ್ಕ ಮಾಡಿದ್ದರು. ತಕ್ಷಣವೇ ಎಸ್ಪಿ ಮಿಥುನ್ ಕುಮಾರ್ ಮನವಿಗೆ ಸ್ಪಂದಿಸಿ ಕೆಲವೇ ನಿಮಿಷಗಳಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.
ಶಿವಮೊಗ್ಗದ ಅಂಬುಲೆನ್ಸ್ ಚಾಲಕ ಸದ್ದಾಮ್ ಹುಸೇನ್ ಮತ್ತು ಜಗದೀಶ್ ಇಬ್ಬರು ಆಂಬುಲೆನ್ಸ್ ಅನ್ನು 3 ಗಂಟೆ 20 ನಿಮಿಷದೊಳಗೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ತಲುಪಿಸಿದ್ದಾರೆ. ಈ ಮೊದಲು ಕೂಡ ಶಿವಮೊಗ್ಗದಿಂದ ಬೆಂಗಳೂರಿಗೆ 5 ಬಾರಿ ಜೀರೋ ಟ್ರಾಫಿಕ್ ನಲ್ಲಿ ಸದ್ದಾಂ ಅಂಬುಲೆನ್ಸ್ ಚಾಲನೆ ಮಾಡಿದ್ದರು. ರಾತ್ರಿ 10.10 ಕ್ಕೆ ಶಿವಮೊಗ್ಗದಿಂದ ಹೊರಟಿದ್ದ ಆ್ಯಂಬುಲೆನ್ಸ್ ಮಧ್ಯರಾತ್ರಿ 1.30 ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯಕ್ಕೆ ತಲುಪಿತ್ತು. ಶಿವಮೊಗ್ಗದಿಂದ ಮಗುವನ್ನು ಆ್ಯಂಬುಲೆನ್ಸ್ ಚಾಲಕ ಜಗದೀಶ, ಸ್ಟಾಫ್ ನರ್ಸ್ ಗಳಾದ ವಿನಯ್ ಹಾಗೂ ಹನುಮಂತ ಇವರು ಕರೆತಂದರು. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.