ಬೆಳ್ತಂಗಡಿ: ದೇಶದ ಜಿಡಿಪಿಗೆ ಅತ್ಯಧಿಕ ಬಲ ನೀಡುವುದು ಸಿವಿಲ್ ಇಂಜಿನಿಯರ್ಗಳಾಗಿದ್ದು, ರಾಜ್ಯದ ಎಲ್ಲಾ ಸಿವಿಲ್ ಇಂಜಿನಿಯರ್ಗಳಿಗೆ ಮಾನ್ಯತೆ ಒದಗಿಸಲು ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಬೆಳ್ತಂಗಡಿ ಎಸಿಸಿಇ ಚೇರ್ಮನ್ ಜಗದೀಶ್ ಪ್ರಸಾದ್ ಹೇಳಿದರು.
![](https://i0.wp.com/veekshakavani.com/wp-content/uploads/2023/09/image-1.png?resize=600%2C375&ssl=1)
ಅಖಿಲ ಭಾರತ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಬೆಳ್ತಂಗಡಿ ಸೆಂಟರ್ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಸೆ.೧೫ ರಂದು ಉಜಿರೆ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಇಂಜಿನಿಯರ್ಗಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಕಟ್ಟಡ ಕಾಮಗಾರಿ ಅಥವಾ ಅನುಮತಿ ಪಡೆದುಕೊಳ್ಳಬೇಕಾದರೆ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಸಂಘಟನೆಯಲ್ಲಿ ನೋಂದಾಯಿಸಿ ಕೊಂಡವರು ಮಾತ್ರ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ತಹಶೀಲ್ದಾರ್ ಮೂಲಕ ಬೆಳ್ತಂಗಡಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಇಂಜಿನಿಯರ್ಗಳಾದ ಅನಿಲ್ ವಿ. ಬಾಳಿಗ ಮತ್ತು ಪ್ರೇಮ್ ಪ್ರಸಾದ್ ಕೆ.ವಿ. ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಅವರಿಗೆ ತಮ್ಮ ವಿವಿಧ ಬೇಡಿಕೆಯುಳ್ಳ ಸಂಘದ ಮನವಿ ಪತ್ರವನ್ನು ನೀಡಲಾಯಿತು. ರೋಟರಿಯ ಪೌಲ್ ಹ್ಯಾರಿಸ್ ಫೆಲೋಶಿಪ್ ಗೆ ಆಯ್ಕೆಯಾದ ರೋಟರಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಅವರಿಗೆ ಮೇಜರ್ ಜನರಲ್ ಎಂ.ವಿ ಭಟ್ ಪ್ರದಾನ ಮಾಡಿದರು.
ಬೆಳ್ತಂಗಡಿ ಶಾಲಾ ಮಕ್ಕಳಿಗೆ ಆಯೋಜಿಸಿದ ಪೆನ್ಸಿಲ್ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮನಸ್ವಿ, ದ್ವಿತೀಯ ಸ್ಥಾನ ಪಡೆದ ಕೃಷ್ಣ ವೈ.ಎಸ್., ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಸಮಾದ್, ದ್ವಿತೀಯ ಸ್ಥಾನ ಪಡೆದ ಪಂಚಮಿ, ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಾತಿ, ದ್ವೀತಿಯ ಸ್ಥಾನ ಪಡೆದ ಸೃತಿನ್ ಅವರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಕೋಶಾಧಿಕಾರಿ ಕೇಶವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಅಧ್ಯಕ್ಷ ಮಚ್ಚಿಮಲೆ ಅನಂತ್ ಭಟ್ ಅವರು ನಿರೂಪಿಸಿ, ಬೆಳ್ತಂಗಡಿ ಎಸಿಸಿಇ ಕಾರ್ಯದರ್ಶಿ ಚೇತನ್ ಎಸ್. ವಂದಿಸಿದರು.
ಮದ್ದಡ್ಕದಿಂದ ಎಸ್.ಡಿ.ಎಂ. ಐಟಿ ಕಾಲೇಜುವರೆಗೆ ವಾಹನ ಜಾಥಾವು ಹಮ್ಮಿಕೊಳ್ಳಲಾಯಿತು. ಕಲ್ಲಡ್ಕ ಶ್ರೀ ವಿಠಲ್ ನಾಯಕ್ ಮತ್ತು ಬಳಗದವರಿಂದ ಸಾಂಸ್ಕೃತಿಕ ವೈವಿದ್ಯ ಗೀತ ಸಾಹಿತ್ಯ ಸಂಭ್ರಮ ನಡೆಯಿತು.