ವಿಟ್ಲ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾದ ಪೆರುವಾಯಿ ನಾರಾಯಣ ಶೆಟ್ಟಿ(82) ಅವರು ವಯೋಸಹಜ ಅನಾರೋಗ್ಯದಿಂದ ಜ.23ರಂದು ರಾತ್ರಿ ನಿಧನರಾಗಿದ್ದಾರೆ.
ಬಂಟ್ವಾಳ ತಾಲೂಕು ಪೆರುವಾಯಿಯಲ್ಲಿ ಜನಿಸಿದ ನಾರಾಯಣ ಶೆಟ್ಟಿ ಅವರು ಪೈವಳಿಕೆಯ ದಿ|ಐತಪ್ಪ ಶೆಟ್ಟಿ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿ, ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಮಾಡಿದ್ದರು. ದಿ|ಅಳಕೆ ರಾಮಯ್ಯ ರೈ ಹಾಗೂ ಕುಡಾಣ ಗೋಪಾಲಕೃಷ್ಣಭಟ್ಟರಿಂದಲೂ ತೆಂಕುತಿಟ್ಟು ಯಕ್ಷಗಾನದ ನಾಟ್ಯಾಭ್ಯಾಸವನ್ನು, ಅಭಿನಯವನ್ನು ಹಾಗೂ ರಂಗತಂತ್ರಗಳನ್ನು ಅಭ್ಯಾಸ ಮಾಡಿಕೊಂಡವರು.
ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ತುಳು ಪ್ರಸಂಗಗಳ ಪಾತ್ರನಿರ್ವಹಣೆಯಲ್ಲೂ ವೈಶಿಷ್ಟ್ಯತೆಯನ್ನು ಮೆರೆದವರು. ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಪ್ರಸಿದ್ಧ ಪಡೆದಿತ್ತು. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.