ಉಡುಪಿ: ಚಾಮರಾಜನಗರ ಹಾಗೂ ಮೈಸೂರು ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಇಳಿಸುತ್ತಾರೆ ಎಂಬ ಭಯವಿದೆ. ಹೀಗಾಗಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರದ ಪತನ ಖಚಿತ ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.


ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ಸಿಎಂ ಹಿಂದುತ್ವ ಹಿಂದೂ ವಿಚಾರಧಾರೆಗೆ ವಿರೋಧ ಇದ್ದವರು. ಒಕ್ಕಲಿಗ ಹಿಂದುಳಿದ ವರ್ಗ ಮರ್ಯಾದಿ ಪ್ರಶ್ನೆ ಬಗ್ಗೆ ಈಗ ಯಾಕೆ ಮಾತಾಡಬೇಕು. ಇದು ಜಾತಿ ಮೇಲೆ ನಡೆಯುವ ಚುನಾವಣೆ ಅಲ್ಲ ದೇಶದ ಚುನಾವಣೆ. ದೇಶದ ಆಡಳಿತ ಮತ್ತು ಭದ್ರತೆಯ ಚುನಾವಣೆ. ಜಾತಿ ಆಧಾರದ ಮೇಲೆ ಜನ ಓಟ್ ಹಾಕಲ್ಲ ಎಂದರು.




