
ದೆಹಲಿ ಜುಲೈ 24: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಸರ್ಕಾರದ ನಿಲುವನ್ನು ವಿವರಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ (Nityanand Rai), ಸಕ್ರಿಯ ಭಯೋತ್ಪಾದಕರನ್ನು ಜೈಲಿಗೆ ಅಥವಾ ಜಹನ್ನಮ್ (ನರಕ)ಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಕಾಂಗ್ರೆಸ್ (Congress) ಸಂಸದ ಪ್ರಮೋದ್ ತಿವಾರಿ ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಯೋತ್ಪಾದಕರು ಯಶಸ್ವಿಯಾಗುವುದಿಲ್ಲ. ಅವರ ಚಟುವಟಿಕೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ. ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ನಿತ್ಯಾನಂದ ರಾಯ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳು 28 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಅವರು ಹೇಳಿದ್ದಾರೆ.
ಮೋದಿ ಸರ್ಕಾರವು ಉಗ್ರರ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನಾವು ಭಯೋತ್ಪಾದನೆಯನ್ನು ಕೊನೆಗೊಳಿಸುತ್ತೇವೆ. ಅವರು (ಭಯೋತ್ಪಾದಕರು) ಜೈಲಿನಲ್ಲಿರುತ್ತಾರೆ ಅಥವಾ ಜಹನ್ನುಮ್ ಗೆ ಹೋಗುತ್ತಾರೆ ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ ಎಂದು ರಾಯ್ ಹೇಳಿದ್ದಾರೆ.
ಯುಪಿಎ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಘಟನೆಗಳು 7,217 ರಿಂದ ಈ ವರ್ಷದ ಜುಲೈನಲ್ಲಿ 2259 ಕ್ಕೆ ಇಳಿದಿದೆ. ಇವುಗಳು ನಡೆಯಬಾರದಿತ್ತು. ಇದು ದುರದೃಷ್ಟಕರ ಆದರೆ ಅವರು (ಪ್ರತಿಪಕ್ಷಗಳು) ಅದರ ಮೇಲೆ ರಾಜಕೀಯ ಮಾಡಬಾರದು” ಎಂದು ಸಚಿವರು ಹೇಳಿದ್ದಾರೆ. 2004 ರಿಂದ 2014 ರ ನಡುವೆ 2,829 ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಯ್ ಸದನಕ್ಕೆ ತಿಳಿಸಿದರು. ಈ ಸಂಖ್ಯೆ 2014 ರಿಂದ 67 ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕ ಘಟನೆಗಳಲ್ಲಿ 69 ರಷ್ಟು ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 28 ಉಗ್ರರನ್ನು ಹತ್ಯೆ ಮಾಡಲಾಗಿದೆ. ವಿಷಾದದ ಸಂಗತಿಯೆಂದರೆ, ನಮ್ಮ ಕೆಲವು ಸೈನಿಕರು ಸಹ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ. ಉಗ್ರರ ಗುಂಡೇಟಿಗೆ ಬಲಿಯಾದ ಯೋಧರ ಸಂಖ್ಯೆ ಕಡಿಮೆ ಇದೆ.





