ಕಳೆದ ಹತ್ತು ದಿನಗಳ ಕಾಲ ತೆಲುಗು ರಾಜ್ಯಗಳಲ್ಲಿ ಗಣೇಶನ ಹಬ್ಬ ಜೋರುಜೋರಾಗಿ ನಡೆದಿದೆ. ಈಗೇನಿದ್ದರೂ ಗಣಪಯ್ಯನ್ನು ವಿಸರ್ಜನೆ ಮಾಡುವ ಕಾರ್ಯಕ್ರಮ. ಇದೂ ವಿಜೃಂಭಣೆಯಿಂದ ನಡೆಯುತ್ತಿದೆ. ಮನೆಯ ಪೂಜಾ ಕೊಠಡಿಗಳಲ್ಲಿ, ಮನೆಯ ಹೊರಗೆ ಬಟಾಬಯಲಿನಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣಪನಿಗೆ ಟಾಟಾ ಬೈ ಹೇಳುವ ಸಮಯ ಬಂದಿದೆ. ಕಾಲಕ್ಕೆ ತಕ್ಕಂತೆ ಇಂದಿನ ಯುವ ಜನತೆ ಗಣಪನಿಗೆ ವಿಶೇಷವಾಗಿ ಗುಡ್ ಬೈ ಹೇಳಿದ್ದಾರೆ. ಮುದ್ದು ಗಣಪ ಸಹ ಗಂಗೆಯ ಮಡಿಲಿಗೆ ಜಾರುತ್ತಿದ್ದಾನೆ.
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಬಾಲಗಣಪನ ವಿಗ್ರಹವನ್ನು ವಿಶಿಷ್ಠವಾದ ಡ್ರೋನ್ ನಲ್ಲಿ ಕೂಡಿಸಿ, ವಿಸರ್ಜನೆ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲದಲ್ಲಿ ಮಕ್ಕಳು, ಯುವಕರು ಈ ಸಾಹಸ ಮೆರೆದಿದ್ದಾರೆ. ತಾವು ಪ್ರತಿಷ್ಠಾಪಿಸಿದ್ದ ಪುಟ್ಟ ಗಣಪನನ್ನು ಒಂಬತ್ತು ದಿನಗಳ ಕಾಲ ಪೂಜೆ ಮಾಡಿ, ಸಂಭ್ರಮಿಸಿದ್ದರು. ಆದರೆ ಇನ್ನೇನು ವಿಸರ್ಜನೆ ಸಮಯ ಬಂದಾಗ ಸ್ಥಳೀಯ ಆಡಳಿತವು ಅನುಮತಿ ನೀಡಿಲ್ಲ. ಹಾಗಾಗಿ ಅವರು ಈ ಬದಲಿ ವ್ಯವಸ್ಥೆ ಬಗ್ಗೆ ಯೋಚಿಸಿದರು.