ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೃದ್ಧರೊಬ್ಬ ಕಾಲು ಜಾರಿ ಬಿದ್ದು 15 ಕಿಮೀ ದೂರ ಈಜಿಕೊಂಡು ಹೋಗಿ, ಸ್ಥಳೀಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ಬಳಿ ನಡೆದಿದೆ.

ಮೈಸೂರಿನ ಜಯಣ್ಣ (60) ಬದುಕಿ ಬಂದಿರುವ ವೃದ್ಧ ಎಂದು ಗುರುತಿಸಲಾಗಿದೆ. ರಾಣೇಬೆನ್ನೂರಿನ ಕುಮಾರಪಟ್ಟಣಂ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಮಯದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಸದ್ಯ ನದಿ ತುಂಬಿ ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಸಿಲುಕಿದ ಜಯಣ್ಣ ಈಜುತ್ತ 15 ಕಿ.ಮೀ.ವರೆಗೂ ತೆರಳಿದ್ದಾರೆ.
ನಂತರ ಈಜಾಗಲು ಆಗದ ಕಾರಣ ಕಾಪಾಡಿ, ಕಾಪಾಡಿ ಎಂದು ಕೂಗಿದ್ದಾರೆ. ಅಷ್ಟರಲ್ಲಿ ಅವರು ಐರಣಿ ಗ್ರಾಮದ ಹೊಳೆಮಠದ ವರೆಗೂ ತೇಲಿ ಬಂದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಮಗ್ರ ಪರಿವರ್ತನಾ ಸಮುದಾಯದ ಸದಸ್ಯರು ಮೀನುಗಾರರ ದೋಣಿ ತೆಗೆದುಕೊಂಡು ನದಿಗೆ ಇಳಿದು ಜಯಣ್ಣ ಅವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.
ನಂತರ ಅವರನ್ನು ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಜಯಣ್ಣ ಅವರ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಮಗ್ರ ಪರಿವರ್ತನಾ ಸಮುದಾಯದ ಅಧ್ಯಕ್ಷ ಆಂಜನೇಯ ನಾಗೇನಹಳ್ಳಿ, ಮೀನುಗಾರ ಗಿರೀಶ ಪಾಟೀಲ, ಮೌನೇಶ ತಳವಾರ, ಇರ್ಪಾನ ಖಂಡಾರಿ, ಹನುಮಂತಪ್ಪ ಮೀನಕಟ್ಟಿ ಜಯಣ್ಣ ಅವರನ್ನು ರಕ್ಷಣೆ ಮಾಡಿದ್ದಾರೆ.




