ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್

Share with

ನವದೆಹಲಿ, ಜನವರಿ 16: 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಮೇ 6 ಮತ್ತು 7ರ ಮಧ್ಯರಾತ್ರಿಯ ದಾಳಿಯ ಸಮಯದಲ್ಲಿ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಿತ್ತು ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ರೌಫ್, ಆಪರೇಷನ್ ಸಿಂಧೂರ್ ಅನ್ನು ಪ್ರಮುಖ ದಾಳಿ ಎಂದು ಕರೆದಿದ್ದಾರೆ. ಆ ದಾಳಿ ಪಾಕಿಸ್ತಾನ (Pakistan) ಸರ್ಕಾರವನ್ನು ದಿಗ್ಭ್ರಮೆಗೊಳಿಸಿತು, ಆದರೆ, ಪಾಕಿಸ್ತಾನೀಯರನ್ನು ಹೇಗೋ ಅಲ್ಲಾಹ್ ರಕ್ಷಿಸಿದನು ಎಂದು ಹೇಳಿದ್ದಾರೆ.

“ಮೇ 6 ಮತ್ತು 7ರಂದು ಮುರಿಡ್ಕೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಮಸೀದಿಯನ್ನು ಗುರಿಯಾಗಿಸಿಕೊಂಡು ಕೆಡವಲಾಯಿತು. ಅದು ಒಂದು ದೊಡ್ಡ ದಾಳಿಯಾಗಿತ್ತು, ಆದರೆ ಅಲ್ಲಾಹ್ ನಮ್ಮನ್ನು ರಕ್ಷಿಸಿದನು. ಅಲ್ಲಿ ಮಕ್ಕಳು ಇರಲಿಲ್ಲ” ಎಂದು ಅವರು ಹೇಳುವ ವಿಡಿಯೋ ವೈರಲ್ ಆಗಿದೆ. “ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದರು, ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಾಗಿತ್ತು, ಯುದ್ಧದ ನಿಯಮಗಳು ಬದಲಾಗಿವೆ” ಎಂದಿದ್ದಾರೆ.

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಲ್‌ಇಟಿಯ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.


Share with

Leave a Reply

Your email address will not be published. Required fields are marked *