ನವದೆಹಲಿ, ಜನವರಿ 19: ಪೋಲೆಂಡ್ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar), ಪೋಲೆಂಡ್ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಯಾವುದೇ ನೇರ ಅಥವಾ ಪರೋಕ್ಷ ಬೆಂಬಲವನ್ನು ನೀಡದಂತೆ ಮನವಿ ಮಾಡಿದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಪೋಲೆಂಡ್ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಸಮಸ್ಯೆಯ ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಜೈಶಂಕರ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.
ಸಿಕೋರ್ಸ್ಕಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ತಮ್ಮ ಆರಂಭಿಕ ಹೇಳಿಕೆಯಲ್ಲಿ, ಪೋಲಿಷ್ ಉಪ ಪ್ರಧಾನ ಮಂತ್ರಿಗೆ ಗಡಿಯಾಚೆಗಿನ ಭಯೋತ್ಪಾದನೆಯ ದೀರ್ಘಕಾಲದ ಬೆದರಿಕೆಯ ಬಗ್ಗೆ ತಿಳಿದಿದೆ ಎಂದು ನಮಗೂ ಗೊತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.
“ಉಪ ಪ್ರಧಾನ ಮಂತ್ರಿಗಳೇ, ನೀವು ನಮ್ಮ ಪ್ರದೇಶಕ್ಕೆ ಹೊಸಬರಲ್ಲ. ಗಡಿಯಾಚೆಗಿನ ಭಯೋತ್ಪಾದನೆಯ ದೀರ್ಘಕಾಲದ ಸವಾಲಿನ ಬಗ್ಗೆ ನಿಮಗೂ ತಿಳಿದಿದೆ. ಈ ಸಭೆಯಲ್ಲಿ ನಿಮ್ಮ ಇತ್ತೀಚಿನ ಪ್ರವಾಸಗಳ ಕುರಿತು ಚರ್ಚಿಸಲು ನಾನು ಬಯಸುತ್ತೇನೆ. ಪೋಲೆಂಡ್ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸಬೇಕು ಮತ್ತು ನಮ್ಮ ನೆರೆಹೊರೆಯ ದೇಶಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಉತ್ತೇಜಿಸಲು ಸಹಾಯ ಮಾಡಬಾರದು” ಎಂದು ಜೈಶಂಕರ್ ಹೇಳಿದ್ದಾರೆ.
ಜೈಶಂಕರ್ ಅವರ ಈ ಹೇಳಿಕೆಗಳ ನಂತರ, ಸಿಕೋರ್ಸ್ಕಿ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. “ಇತ್ತೀಚೆಗೆ ಚಲಿಸುವ ರೈಲಿನ ಕೆಳಗೆ ಸ್ಫೋಟಕವಿಟ್ಟು ಪೋಲಿಷ್ ರೈಲ್ವೆ ಮಾರ್ಗವನ್ನು ಸ್ಫೋಟಿಸಲಾಗಿತ್ತು. ಪೋಲೆಂಡ್ನಲ್ಲೂ ಭಯೋತ್ಪಾದನೆ ದೊಡ್ಡ ಸವಾಲಾಗಿದೆ ಎಂದು ಪೋಲಿಷ್ ಸಚಿವರು ಹೇಳಿದ್ದಾರೆ.
ತಮ್ಮ ಮಾತುಕತೆಯ ಸಮಯದಲ್ಲಿ, ಇಬ್ಬರೂ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ ಸುಂಕಗಳ ಬಗ್ಗೆಯೂ ಚರ್ಚೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಕಚ್ಚಾ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತವನ್ನು ಟೀಕಿಸಿದ್ದಾರೆ ಮತ್ತು ಶೇ. 50ರಷ್ಟು ಸುಂಕಗಳನ್ನು ವಿಧಿಸಿದ್ದಾರೆ. ಆರಂಭದಲ್ಲಿ, ಅವರು ಶೇ. 25ರಷ್ಟು ಸುಂಕಗಳನ್ನು ವಿಧಿಸಿದ್ದರು, ಆದರೆ, ಬಳಿಕ ರಷ್ಯಾದೊಂದಿಗಿನ ವ್ಯಾಪಾರದ ಕಾರಣಕ್ಕೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕಗಳನ್ನು ವಿಧಿಸಿದರು. ಈ ಕ್ರಮಕ್ಕಾಗಿ ಭಾರತ ಪದೇ ಪದೇ ಅಮೆರಿಕವನ್ನು ಟೀಕಿಸಿದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಸಿಕೋರ್ಸ್ಕಿ, ಸುಂಕಗಳ ಮೂಲಕ ದೇಶವನ್ನು ಟಾರ್ಗೆಟ್ ಮಾಡುವ ಅನ್ಯಾಯಕ್ಕೆ ನಾನು ಕೂಡ ವಿರೋಧಿಸುತ್ತೇನೆ ಎಂದಿದ್ದಾರೆ.





