ಉಡುಪಿ: ಜಿಲ್ಲಾದ್ಯಂತ ಗುರುವಾರ ಸಂಜೆ ಸಾಧಾರಣ ಮಳೆ ಸುರಿದಿದೆ. ಉಡುಪಿ ನಗರ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ ಹೀಗೆ ಜಿಲ್ಲೆಯ ಎಲ್ಲೆಡೆ ಸಾಧಾರಣ ಮಳೆ ಸುರಿದಿದೆ. ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆಯಾಯಿತು.

ಕಾರ್ಕಳ, ಹೆಬ್ರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ ಬಳಿಕ ಕೆಲಕಾಲ ಬಿಟ್ಟುಬಿಟ್ಟು ಮಳೆ ಸುರಿದಿದೆ. ಕಾರ್ಕಳದ ಮಾಳ, ಈದು, ಬಜಗೋಳಿ, ಅಜೆಕಾರು, ಅಂಡಾರು ಭಾಗಗಳಲ್ಲಿ ರಾತ್ರಿವರೆಗೂ ಸಾಧಾರಣ ಮಳೆಯಾಗಿದೆ. ಹೆಬ್ರಿ, ಶಿವಪುರ, ಸೋಮೇಶ್ವರ ಕಬ್ಬಿನಾಲೆ, ಮುದ್ರಾಡಿ, ಮುನಿಯಾಲು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದೆ. ರಾ. ಹೆ. ಬದಿಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ಕೆಲವೆಡೆ ನೀರು ರಸ್ತೆಯಲ್ಲೇ ಹರಿದು ವಾಹನ ಸಂಚಾರಕ್ಕೆ ಸಮಸ್ಯೆ ಆಯಿತು. ಚತುಷ್ಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ರಸ್ತೆ ಅಗೆಯಲಾಗಿದ್ದು, ಬೃಹತ್ ಮರಗಳು ಅಪಾಯದ ಅಂಚಿನಲ್ಲಿವೆ. ಗಾಳಿ ಮಳೆ ಸಂದರ್ಭ ಮರಗಳು ಉರುಳುವ ಅಪಾಯವಿದ್ದು, ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




