
ಜನರ ಜೊತೆ ಸಹಭೋಜನಕ್ಕಾಗಿ ವಸ್ತ್ರ ವಿತರಣೆ : ಸುಮಾ ಅಶೋಕ್ ರೈ

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿನ.13ರಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲಿರುವ ವಸ್ತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನ.4ರಂದು ಜರಗಿತು.
ಸಭೆಯನ್ನುದ್ದೇಶಿಸಿ ಟ್ರಸ್ಟ್ ನ ಮುಖ್ಯಸ್ಥೆ ಸುಮಾ ಅಶೋಕ್ ರೈ ಮಾತನಾಡಿ ಸುಮಾರು ಹತ್ತು ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮ ನಡೆಸುತ್ತಿದ್ದು ಇದು ಜನರ ಜೊತೆ ಸಹಭೋಜನ ನಡೆಸುವ ಏಕೈಕ ಉದ್ದೇಶವನ್ನು ಹೊಂದಿದ್ದು ಜನತೆಯ ಆಶೀರ್ವಾದವೇ ನಮ್ಮ ಟ್ರಸ್ಟಿಗೆ ಆಧಾರವಾಗಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ನಡೆಯುತ್ತಿದ್ದ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಕಳೆದ ವರ್ಷ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಕಳೆದ ಬಾರಿ 30 ಸಾವಿರ ಮಂದಿ ಅನ್ನದಾನ ಹಾಗೂ ವಸ್ತ್ರ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ 50 ಸಾವಿರಕ್ಕೂಮಿಕ್ಕಿ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರಿಗೂ ವಸ್ತ್ರದಾನ ಹಾಗೂ ಅನ್ನದಾನ ನಡೆಯುತ್ತದೆ. ಕಾರ್ಯಕ್ರಮದ ಆಹ್ವಾನ ನೀಡುವ ಉದ್ದೇಶದಿಂದ ಪ್ರತೀ ಗ್ರಾಮದಲ್ಲಿ ಟ್ರಸ್ಟ್ ಸಭೆಯನ್ನು ಆಯೋಜಿಸಲಾಗುತ್ತಿದೆ. ಅದೇ ದಿನ ಶಾಸಕರು ಹಾಗೂ ನಮ್ಮ ಟ್ರಸ್ಟಿನ ಪ್ರಮುಖರು,ಸದಸ್ಯರು ಫಲಾನುಭವಿಗಳಜೊತೆ ಸಹಭೋಜನ ಕಾರ್ಯಕ್ರಮವನ್ನು ನಡೆಸಲಿದ್ದು ಅದುವೇ ನಮ್ಮ ಟ್ರಸ್ಟಿನ ಉದ್ದೇಶವಾಗಿದೆ. ಜಾತಿ,ಮತ,ಧರ್ಮ ರಾಜಕೀಯ ಬೇಧಭಾವವಿಲ್ಲದೆ ಪ್ರತೀಯೊಬ್ಬರೂ ಈ ಕಾರ್ಯಕ್ರಮದಲ್ಲಿಭಾಗವಹಿಸುವಂತೆ ಸುಮಾ ಅಶೋಕ್ ರೈ ಮನವಿ ಮಾಡಿದರು. ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸಹಿತ ಟ್ರಸ್ಟಿನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ಧರು.




