ಉಪ್ಪಳ: ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೊರಗ ಸಮಾಜ ಬಂಧುಗಳ ಕ್ರೀಡೋತ್ಸವವನ್ನು ಡಿ.24ರಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಶ್ರೀ ಭಾಸ್ಕರ ರೈ ಮಂಜಲ್ತೋಡಿಯವರ ಅಧ್ಯಕ್ಷತೆಯಲ್ಲಿ, ರಷ್ಯಾದಲ್ಲಿರುವ ಉದ್ಯಮಿ ಶ್ರೀ ಮಹಾಬಲೇಶ್ವರ ಭಟ್ ಎಡಕ್ಕಾನರವರು ಉದ್ಘಾಟಿಸಿದರು.
ನಂತರ ಅವರು “ನಾವು ಕೀಳರಿಮೆ ತೊರೆದು ಒಂದಾಗಿ ಬಾಳೋಣ” ಎಂದು ಕರೆನೀಡಿದರು. ಮಂಜಲ್ತೋಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕ್ರೀಡೆಯ ಮೂಲಕ ನಮ್ಮ ನಡುವೆ ಬಾಂಧವ್ಯ ಬೆಳೆಯುತ್ತದೆ,ಈ ಕ್ರೀಡೋತ್ಸವದ ಮೂಲಕ ನಾವು ಒಂದಾಗಿ ಬೆಳೆಯೋಣ” ಎಂದು ಕರೆಕೊಟ್ಟರು. ಪೂಜ್ಯಶ್ರೀಗಳು ತಮ್ಮ ಆಶೀರ್ವಚನದಲ್ಲಿ “ಕೊರಗ ಸಮಾಜ ದೇಶದ ಅವಿಭಾಜ್ಯ ಅಂಗ, ಅದಕ್ಕಾಗಿ ನಾವು ನಮ್ಮ ದೌರ್ಬಲ್ಯ ಕೀಳರಿಮೆಗಳನ್ನು ತೊರೆದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡಿ ಸಾಗಬೇಕು ಅದಕ್ಕಾಗಿ ಮುಂದಿನ ಡಿ.31ರಂದು ನಡೆಯುವ ಕೊರಗ ಸಮಾಜ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಸಾಮರ್ಥ್ಯ ತೋರಿಸೋಣ, ಕೊಂಡೆವೂರು ಮಠವು ನಿಮಗೆ ಸರ್ವ ರೀತಿಯಲ್ಲೂ ಸಹಕಾರ ನೀಡುತ್ತದೆ” ಎಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಶ್ರೀ ಸಂಜೀವ ಪುಳಿಕೂರು ಸಮಾಜ ಸಂಗಮದ ವಿವರಗಳನ್ನು ನೀಡಿದರು. ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರು ಸ್ವಾಗತ ಮತ್ತು ವಂದನಾರ್ಪಣೆ ಮತ್ತು ನಿರೂಪಣೆಯನ್ನು ಶ್ರೀ ಸದಾಶಿವ ಮೋಂತಿಮಾರು ನೆರವೇರಿಸಿದರು. ಬಳಿಕ ಜಿಲ್ಲೆಯ ಎಲ್ಲೆಡೆಯಿಂದ ಬಂದ ಕ್ರೀಡಾಳುಗಳ ಸಮ್ಮುಖದಲ್ಲಿ ಪೂಜ್ಯರು ಕ್ರೀಡಾ ಧ್ವಜಾರೋಹಣಗೈದರು. ನಂತರ ಕಬಡ್ಡಿ, ವಾಲಿಬಾಲ್, ಬುಟ್ಟಿ ಹೆಣೆಯುವುದು, ಲಿಂಬೆ ಚಮಚ, ದಂಪತಿಗಳಿಗೆ ಹಾಳೆ ಎಳೆಯುವುದು ಇತ್ಯಾದಿ ಸ್ಪರ್ಧೆಗಳು ದಿನಪೂರ್ತಿ ನಡೆದವು. ಕ್ರಿಕೆಟ್ ಪಂದ್ಯಾಟ ನಡೆದಿದೆ.