![](https://i0.wp.com/veekshakavani.com/wp-content/uploads/2023/08/New-Project-1.jpg?resize=640%2C400&ssl=1)
ಬಂಟ್ವಾಳ: ವಿಜಯ TIMES ಎಂಬ ಯೂಟ್ಯೂಬ್ನಲ್ಲಿ ದ.ಕ ಜಿಲ್ಲೆಯಲ್ಲಿ ಭರ್ಜರಿ ಬಾಕ್ಸೈಟ್ ಲೂಟಿ ಎಂಬ ಶಿರೋನಾಮೆಯಡಿಯಲ್ಲಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ, ಪೊಲೀಸರ ವೀಡಿಯೋ ಚಿತ್ರೀಕರಿಸಿ ಇದರಿಂದ ಮಾಮೂಲು ಸಂದಾಯವಾಗುತ್ತಿದೆ ಎಂಬುದಾಗಿ ವರದಿ ಮಾಡಿದ್ದ ವಿಜಯಲಕ್ಷ್ಮೀ ಶಿಬರೂರು ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ 18/07/2023 ರಂದು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ಪರಿಸರದಲ್ಲಿ ಬಾಕ್ಸೈಟ್ ಅದಿರು ಸಾಗಾಟ ನಡೆಸುತ್ತಿದ್ದ ಲಾರಿಗಳ ಹಾಗೂ ಪೊಲೀಸ್ ಚೆಕ್ ಪೋಸ್ಟ್ ಗಳ ವೀಡಿಯೋ ಮಾಡಿ, ‘ವಿಜಯ TIMES ಯೂಟ್ಯೂಬ್’ ಪ್ರಸಾರವಾಹಿನಿಯಲ್ಲಿ ದ.ಕ ಜಿಲ್ಲೆಯಲ್ಲಿ ಭರ್ಜರಿ ಬಾಕ್ಸೈಟ್ ಲೂಟಿ ಎಂಬ ಶಿರೋನಾಮೆಯಡಿಯಲ್ಲಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದು, ಜಿಲ್ಲೆಯ ಗಡಿಭಾಗದಲ್ಲಿ ಕೋಮುಗಲಭೆ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿದ್ದ ಕೆ.ಎಸ್.ಆರ್.ಪಿ ಪೊಲೀಸರ ವಿಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಇದರಿಂದ ಮಾಮೂಲು ಸಂದಾಯವಾಗುತ್ತಿದೆ ಎಂಬುದಾಗಿ ವರದಿಯನ್ನು ನೀಡಿರುವುದು ಕಂಡುಬಂದಿರುತ್ತದೆ.
ಸದರಿ ಬಾಕ್ಸೈಟ್ ಅದಿರು ಸಾಗಾಟದ ವಿಚಾರವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿರುವುದಾಗಿದ್ದು, ಇದರಲ್ಲಿ ಪೊಲೀಸ್ ಇಲಾಖೆಯ ಯಾವುದೇ ಪಾತ್ರವಿರುವುದಿಲ್ಲ ಎಂದು ಪ್ರಕರಣದ ಆರೋಪಿಗಳಿಗೆ ತಿಳಿದಿದ್ದರೂ ಕೂಡಾ, ಯಾವುದೇ ದಾಖಲೆ ಅಥವಾ ಪುರಾವೆ ಇಲ್ಲದೇ ಸಾರ್ವಜನಿಕ ವಲಯದಲ್ಲಿ ಪೊಲೀಸರ ಘನತೆಗೆ ದಕ್ಕೆ ಉಂಟು ಮಾಡುವ ದುರುದ್ದೇಶದಿಂದ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ರೀತಿಯಲ್ಲಿ ವೀಡಿಯೋ ಮಾಡಿ ಅಂತರ್ಜಾಲದಲ್ಲಿ ಹರಿಯಬಿಟ್ಟಿರುವ ಆರೋಪಿ ವಿಜಯಲಕ್ಷ್ಮೀ ಶಿಬರೂರು ಹಾಗೂ ವಿಡಿಯೋ ರೆಕಾರ್ಡ್ ಮಾಡಿರುವ ಕ್ಯಾಮರಮೆನ್ ಹಾಗೂ ವಾಹನದ ಚಾಲಕರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 141/2023 ಕಲಂ: 505(1) ಐಪಿಸಿ ಮತ್ತು ಕಲಂ 123 ಕೆ ಪಿ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿದೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.