ಉಪ್ಪಳ: ನಯಬಜಾರ್ ಬಳಿಯಲ್ಲಿ ನಿರ್ಮಿಸಿದ ಅಂಡರ್ಪಾಸ್ ಒಂದು ಭಾಗದ ಸರ್ವಿಸ್ ರಸ್ತೆಗಿಂತ ತಿಗ್ಗಿರುವುದು ಸಮಸ್ಯೆಯಾಗಿದ್ದು, ಕಾಮಗಾರಿ ಅವ್ಯವಸ್ಥೆಯಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಅಂಡರ್ಪಾಸ್ ಕಾಮಗಾರಿಗೊಂಡು ಹಲವು ತಿಂಗಳು ಕಳೆದರೂ ಸರ್ವೀಸ್ ರಸ್ತೆಗೆ ಸಮತಟ್ಟು ಇಲ್ಲದ ಕಾರಣ ವಾಹನಗಳ ಸಂಚಾರಕ್ಕೆ ಅಸಾಧ್ಯವಾಗಿದ್ದು, ವ್ಯವಸ್ಥೆಗೆ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಈ ಪ್ರದೇಶದ ಜನರ ಸಂಚಾರ ಸಮಸ್ಯೆಯಾಗಿದೆ.
ನಯಬಜಾರ್ನ ಒಂದು ಭಾಗದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ವಿಲೇಜ್ ಆಫೀಸ್, ಶಿಕ್ಷಣಾಧಿಕಾರಿ ಕಚೇರಿ, ಶಾಲೆಗಳು, ಮಂಗಲ್ಪಾಡಿ ಪಂಚಾಯತ್, ಕ್ಷೇತ್ರಗಳು, ಮಸೀದಿಗಳು, ಬ್ಯಾಂಕ್ ಸಹಿತ ಹಲವಾರು ಕೇಂದ್ರಗಳು, ಇನ್ನೊಂದು ಭಾಗದ ಅಂಬಾರು, ಚೆರುಗೋಳಿಯಲ್ಲಿ ಅಗ್ನಿಶಾಮಕದಳ, ಬ್ಯಾಂಕ್, ಆರಾದನಾಲಯಗಳು, ಶಾಲೆ, ಅಂಗನವಾಡಿಗಳು ಒಳಗೊಂಡಿದೆ.
ಈ ಎರಡು ಭಾಗಗಳಿಗೆ ತೆರಳಲು ಕೈಕಂಬ ಅಥವಾ ಕುಕ್ಕಾರು ದಾರಿಯಾಗಿ ಸುತ್ತು ಬಳಸಿ ಸಂಚಾರ ನಡೆಸಬೇಕಿದೆ. ಆದರೆ ಅಂಡರ್ಪಾಸ್ ಮೂಲಕ ಸಂಚರಿಸಲು ಸಾಧ್ಯವಾದರೆ ಎರಡು ಕಡೇಗಳ ಸಂಚಾರ ಸುಗಮವಾಗಲಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲೇ ಅಂಡರ್ಪಾಸ್ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.