ತಾವು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಹರಸಾಹಸ
ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹ
ಉಡುಪಿ: ರೈತರು ತಾವು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.
ಒಂದೆಡೆ ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಪರ್ಯಾಯ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಂಗ, ಜಿಂಕೆ, ಕಾಡುಹಂದಿ, ನವಿಲು ಮತ್ತು ಕಾಡೆಮ್ಮೆಗಳು ಕೃಷಿ ಭೂಮಿಗಳಿಗೆ ದಾಳಿ ನಡೆಸಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ನಾಶ ಮಾಡುತ್ತಿವೆ. ಕೃಷಿಕರು ಮಂಗಗಳನ್ನು ಭಯಭೀತಗೊಳಿಸಿ ಓಡಿಸಲು ಪರವಾನಿಗೆ ಪಡೆದ ಬಂದೂಕುಗಳನ್ನು ಬಳಸುತ್ತಿದ್ದಾರೆ. ಅದೇ ರೀತಿ ಪ್ರಾಣಿಗಳನ್ನು ಓಡಿಸಲು ಪಟಾಕಿಗಳನ್ನು ಕೂಡ ಬಳಸುತ್ತಿದ್ದಾರೆ. ಆದರೆ, ಇವೆಲ್ಲವೂ ತಾತ್ಕಾಲಿಕ ಪರಿಹಾರಗಳಾಗಿವೆ.
ಯಾವುದೇ ತೊಂದರೆ ಇಲ್ಲದೆ ಪ್ರಾಣಿಗಳನ್ನು ಓಡಿಸಲು ಬಳಸುವ ವಿವಿಧ ತಂತ್ರಗಳು ಹಾಗೂ ಮಾರ್ಗಗಳು ಇದೀಗ ಹಳೆಯದಾಗುತ್ತಿವೆ ಎನ್ನುತ್ತಾರೆ ಕೃಷಿಕರು.
ಉಡುಪಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಕೃಷಿ ಮತ್ತು ಜನರ ಮೇಲೆ ದಾಳಿ ನಡೆಸಿದ ಪರಿಣಾಮ ಅಪಾರ ನಷ್ಟಗಳು ಸಂಭವಿಸಿವೆ. ಇದರ ಪರಿಹಾರಕ್ಕಾಗಿ ಮಂಕಿ ಪಾರ್ಕ್ ನಿರ್ಮಾಣ ಮಾಡುವ ಪ್ರಸ್ತಾಪ ಇದೆಯಾದರೂ ಸರ್ಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇನ್ನು ಮುಂದೆಯಾದರೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.