ಬೆಂಗಳೂರು, ಆಗಸ್ಟ್ 11: ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಕರ್ನಾಟಕಕ್ಕೆ ಶಾಕ್ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಹರಿಸುವಂತೆ ಶಿಫಾರಸ್ಸು ಮಾಡಿದೆ. ಇಂದು ನಡೆದಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, CWRC ಶಿಫಾರಸು ಹಿನ್ನೆಲೆ ಮಧ್ಯಾಹ್ನದ ಬಳಿಕ ದೆಹಲಿಯಲ್ಲಿ CWMA ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಂತಿಮ ಆದೇಶ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೇ ತೀವ್ರ ಬರಸ್ಥಿತಿಯ ನಡುವೆ ಈ ಹಿಂದೆ ಕೂಡ ನೀರು ಹರಿಸಲು CWMA ಆದೇಶ ನೀಡಿತ್ತು ಎಂಬುದಿಲ್ಲಿ ಗಮನಾರ್ಹ.
ರಾಜ್ಯದ ಅಧಿಕಾರಿಗಳಿಂದ ತೀವ್ರ ಅಸಮಾಧಾನ
ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯ ತೀರ್ಮಾನ ಸಂಬಂಧ ರಾಜ್ಯದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ್ಕದಲ್ಲಿಯೇ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇಲ್ಲಿಯೇ ಸಂಕಷ್ಟದ ಸ್ಥಿತಿಯಲ್ಲಿ ಜನರಿರುವಾಗ ನಿತ್ಯ 1 ಟಿಎಂಸಿ ನೀರು ಹರಿಸಿ ಅಂದರೆ ಹೇಗೆ? ಇಷ್ಟು ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಅಸಮಧಾನ ಹೊರಹಾಕಿರುವ ಪ್ರಸಂಗ ನಡೆದಿದೆ.
ಹಿಂದಿನ ಆದೇಶಕ್ಕಿಂತ ಹೆಚ್ಚಿನ ನೀರು ಹರಿಸಿರುವ ಕರ್ನಾಟಕ
ತಮಿಳುನಾಡಿಗೆ ನೀರು ಹರಸುವ ಸಂಬಂಧ ಈ ಹಿಂದೆ CWMA ನೀಡಿದ್ದ ಆದೇಶವನ್ನು ಸಂಕಷ್ಟದ ಸಮಯದಲ್ಲಿಯೂ ಕರ್ನಾಟಕ ಸರ್ಕಾರ ಪಾಲನೆ ಮಾಡಿದೆ. 15 ದಿನಗಳಲ್ಲಿ 4.5 ಟಿಎಂಸಿ ನೀರು ಹರಿಸುವಂತೆ CWMA ತಿಳಿಸಿದ್ದ ಹಿನ್ನೆಲೆ ಕಳೆದ 15 ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ನೀರು ಹರಿಸಲಾಗಿದೆ. ಸುಮಾರು 7.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿರುವ ಮಾಹಿತಿ ಇದೆ. ಅಂದರೆ ಮೂರು ಟಿಎಂಸಿ ಹೆಚ್ಚುವರಿ ನೀರು ಕಬಿನಿ ಜಲಾಶಯ ತುಂಬಿದ್ದರ ಹಿನ್ನೆಲೆ ತಮಿಳುನಾಡಿಗೆ ಹರಿದಿದೆ. ಹೀಗಿದ್ದರೂ ಕಾವೇರಿ ನೀರಿಗಾಗಿ ನೆರೆ ರಾಜ್ಯದ ಕ್ಯಾತೆ ಮುಂದಿವರಿದಿರೋದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.





