ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಪಾಪನಾಶಿನಿ ಹೊಳೆಯ ರೈಲ್ವೇ ಸೇತುವೆ ಬಳಿ ಶುಕ್ರವಾರ ನಡೆದಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಭಾರತದ ಮೂಲದ ಮಹಿಳೆ ರೈಲಿನಿಂದ ಬಿದ್ದು ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮಹಿಳೆಯ ದೇಹ ಛಿದ್ರಗೊಂಡಿದ್ದು, ರೈಲ್ವೇ ಟ್ರ್ಯಾಕ್ ಮತ್ತು ಹೊಳೆಗೆ ಹಾಕಿರುವ ಬೃಹತ್ ಕಂಬದ ಭೀಮ್ನೊಳಗೆ ಸಿಲುಕಿಗೊಂಡಿದೆ. ಮಹಿಳೆಯ ಮೃತದೇಹವನ್ನು ಕಾಪು ಪೊಲೀಸರು ಮತ್ತು ರೈಲ್ವೇ ಪೊಲೀಸರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಸಿಬ್ಬಂದಿ ನಾಗರಾಜ್ ಮೇಲೆತ್ತಿ, ಉಡುಪಿ ಅಜ್ಜರಕಾಡು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.