ಕುಟುಂಬಗಳು ಪ್ರಾರ್ಥನೆಯ ದೇಗುಲಗಳಾಗಬೇಕಾದ ಅವಶ್ಯಕತೆ ಇದೆ: ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ಪ್ರಾರ್ಥನೆ ಎನ್ನುವುದು ದೇವರೊಂದಿಗೆ ನಾವು ಇಟ್ಟುಕೊಳ್ಳುವ ಪ್ರೀತಿಯ ಸಂಬಂಧವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಬಲಿಪೂಜೆಯನ್ನು ನೇರವೇರಿಸಿ ಆಶೀರ್ವಚನ ನೀಡಿದರು.
ಕುಟುಂಬವು ಪ್ರಾರ್ಥನೆ ಮಾಡಲು ಇರುವ ಪ್ರಥಮ ಶಾಲೆಯಾಗಿದ್ದು ಅಲ್ಲಿಯೇ ಪ್ರತಿಯೊಬ್ಬ ವ್ಯಕ್ತಿಯು ಬೆಳೆದು ದೊಡ್ಡವನಾಗುವಾಗ ಪ್ರಾರ್ಥನೆಯ ಮಹತ್ವವನ್ನು ಅರಿಯುತ್ತಾನೆ. ನಮ್ಮ ಕುಟುಂಬಗಳು ಪ್ರಾರ್ಥನೆ ದೇಗುಲಗಳಾಗಬೇಕಾದ ಅವಶ್ಯಕತೆ ಇದ್ದು, ಪ್ರತಿನಿತ್ಯ ಕುಟುಂಬದ ಸದಸ್ಯರು ಜೊತೆಯಾಗಿ ಸೇರಿ ಪ್ರಾರ್ಥಿಸಿದಾಗ ನಮ್ಮ ಕೋರಿಕೆಗಳನ್ನು ದೇವರು ಮನ್ನಿಸುತ್ತಾರೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೋನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ವಲಯ ಧರ್ಮಗುರು ಪಾವ್ಲ್ ರೇಗೊ, ಪುಣ್ಯಕ್ಷೇತ್ರದ ಮುಖ್ಯಸ್ಥರಾದ ಸುನೀಲ್ ವೇಗಸ್ ಸೇರಿದಂತೆ ಹಲವು ಧರ್ಮಗುರುಗಳು ಉಪಸ್ಥಿತರಿದ್ದರು.