ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಹಲವಾರು ಕಡೆ ಭೂ ಕುಸಿತ ಸಂಭವಿಸಿದೆ.

ಚಂದ್ರಗಿರಿ ಸಮೀಪ ಮನೆಯ ಪಾರ್ಶ್ವದ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ನಡೆದಿದೆ. ಚಂದ್ರಗಿರಿಯ ನಡಕ್ಕಾಲ್ ನಿವಾಸಿ ಮಿತೇಶ್ ಎಂಬವರ ಮನೆ ಸಮೀಪದ ಗುಡ್ಡ ಮೊನ್ನೆ ರಾತ್ರಿಯ ಭೀಕರ ಮಳೆಗೆ ಕುಸಿದಿದ್ದು, ಬೃಹತ್ ಗಾತ್ರದ ಕಲ್ಲು ಬಂಡೆ ಸಹಿತ ಮಣ್ಣು ಮನೆಯ ಒಂದು ಪಾರ್ಶ್ವದ ಮೇಲೆ ಬಿದ್ದಿದೆ.

ಇದರಿಂದ ಮನೆಯ ಒಂದು ಕೊಠಡಿ ಸಂಪೂರ್ಣ ಹಾನಿಗೊಳಗಾಗಿದೆ ಮಾತ್ರವಲ್ಲದೆ ಮನೆಗೂ ಭಾಗಶ: ಹಾನಿಯಾಗಿದೆ. ಗುಡ್ಡ ಕುಸಿತದ ವೇಳೆ ಮನೆಯಲ್ಲಿ ನಾಲ್ವರು ಇದ್ದರು. ಕುಸಿತದ ಸದ್ದು ಕೇಳಿ ಅವರು ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಮನೆ ಸಮೀಪದ ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಮಿತೇಶ್ ತಿಳಿಸಿದ್ದಾರೆ.




