ಕಾಸರಗೋಡು: ಜಿಲ್ಲೆಯ ಪ್ರಮುಖ ಮೂರು ರಿಜಿಸ್ಟ್ರಾರ್ ಕಚೇರಿಗಳಿಗೆ ಶುಕ್ರವಾರ (ಆ.8) ವಿಜಿಲೆನ್ಸ್ ದಾಳಿ ನಡೆದಿದೆ.

ಬದಿಯಡ್ಕ, ಕಾಸರಗೋಡು, ನೀಲೇಶ್ವರ ರಿಜಿಸ್ಟ್ರಾರ್ ಕಚೇರಿಗಳಿಗೆ ಕಾಸರಗೋಡು ಡಿವೈಎಸ್ಪಿ ವಿ.ಉಣ್ಣಿಕೃಷ್ಣನ್ ನೇತೃತ್ವದಲ್ಲಿ ದಾಳಿ ನಡೆದ ವೇಳೆ ಬದಿಯಡ್ಕ ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲವರು ಗೂಗಲ್ ಪೇ ಮೂಲಕ ಲಂಚ ಸ್ವೀಕರಿಸುವುದು ಅಧಿಕೃತವಾಗಿ ಪತ್ತೆಯಾಗಿದೆ.
ಬದಿಯಡ್ಕದಲ್ಲಿ 1,86,000 ರೂಪಾಯಿಗಳನ್ನು ರಿಜಿಸ್ಟ್ರಾರ್ ಆಫೀಸಿನ ನೌಕರರು ಪಡೆದಿರುವುದು ಬೆಳಕಿಗೆ ಬಂದಿದೆ. ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಸ್ತಾವೇಜು ಬರಹಗಾರರಿಂದ ಮತ್ತು ಭೂವ್ಯವಹಾರ ನಿರತರಿಂದ ಹಣ ಪಡೆದಿದ್ದು,ತನಿಖೆ ಆರಂಭಗೊಂಡಿದೆ. ಬದಿಯಡ್ಕ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟ್ರಾರ್ ಉದ್ಯೋಗದಲ್ಲಿದ್ದ ಆರ್.ವಿನೋದ್, ಗುರುವಾರ ಕರ್ತವ್ಯದಲ್ಲಿದ್ದ ಭಾಸ್ಕರನ್, ನೌಕರರಾದ ಅಬೂಬಕರ್ ಸಿದ್ದೀಖ್, ಯದುಕೃಷ್ಣನ್ ಎಂಬಿವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ದಸ್ತಾವೇಜು ಬರಹಗಾರರ ಮೂಲಕ ಈ ಹಣ ಜಮೆಯಾಗಿದೆ.
ಇದೇ ವೇಳೆ ಕಾಸರಗೋಡು ಮತ್ತು ನೀಲೇಶ್ವರ ಕಚೇರಿಗಳಲ್ಲಿ ಯಾವುದೇ ಅವ್ಯವಹಾರ ಪತ್ತೆಯಾಗಿಲ್ಲ. ಬದಿಯಡ್ಕದ ಕುರಿತು ದೂರುಗಳಿದ್ದುವು ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.




