ನಾಡಿನೆಲ್ಲೆಡೆ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂಭ್ರಮ ಈಗಾಗಲೇ ಶುರುವಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಮನೆ ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಪೂಜಿಸುತ್ತಾರೆ. ನೀವು ಕೂಡ ಮನೆಯಲ್ಲಿ ವಿಘ್ನ ವಿನಾಯಕನನ್ನು ಕೂರಿಸುತ್ತೀರಾ, ಹಾಗಿದ್ದರೆ ಈ ಬಾರಿ ಮಾರುಕಟ್ಟೆಯಲ್ಲಿ ಸಿಗುವಂತಹ POP ನಂತಹ ವಸ್ತುಗಳಿಂದ ಮಾಡಲ್ಪಟ್ಟ ಗಣೇಶ ಮೂರ್ತಿಯನ್ನು ತರುವ ಬದಲು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣಪನ (eco-friendly Ganesh) ಮೂರ್ತಿಯನ್ನು ತಯಾರಿಸಿ. POP ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಂತಹ ವಸ್ತುವಿನಿಂದ ತಯಾರಿಸಿದ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ನಂತರ ಅದು ಕರಗುವುದಿಲ್ಲ, ಇದರಿಂದ ಪರಿಸರಕ್ಕೂ ಹಾನಿ. ಆದರ ಕಾರಣ ಮನೆಯಲ್ಲಿಯೇ ಈ ರೀತಿ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಿ. ಜೊತೆಗೆ ಮೂರ್ತಿಯನ್ನು ತಯಾರಿಸುವಾಗ ನೀವು ಒಂದಷ್ಟು ನಿಯಮಗಳನ್ನು ಸಹ ಪಾಲಿಸಬೇಕು. ಅದೇನೆಂಬುದನ್ನು ನೋಡೋಣ.
ಮನೆಯಲ್ಲಿಯೇ ತಯಾರಿಸಿ ಪರಿಸರಸ್ನೇಹಿ ಗಣಪ:
ಮಾರುಕಟ್ಟೆಯಲ್ಲಿ ಸಿಗುವಂತಹ POP ಗಣಪನ ವಿಗ್ರಹ ಪರಿಸರಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದ ಕಾರಣ ಮಣ್ಣಿನಿಂದ ಅರಶಿನದಿಂದ ಮನೆಯಲ್ಲಿಯೇ ನೀವು ಪರಿಸರಸ್ನೇಹಿ ಗಣೇಶನ ವಿಗ್ರಹವನ್ನು ತಯಾರಿಸಬಹುದು.
ಮಣ್ಣಿನಿಂದ ಗಣಪತಿಯನ್ನು ಮಾಡಿ: ನೀವು ಜೇಡಿಮಣ್ಣನ್ನು ಬಳಸಿ ಗಣೇಶನ ಮೂರ್ತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮೃದುವಾದ ಸ್ವಚ್ಛ ಜೇಡಿ ಮಣ್ಣಿಗೆ ಮರಳು ಇಲ್ಲವೇ ಅರಶಿನ, ತುಪ್ಪ, ಜೀನುತುಪ್ಪ, ಹಸುವಿನ ಸಗಣಿ ಮತ್ತು ನೀರನ್ನು ಬೆರೆಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸಿ.

ಅರಿಶಿನದಿಂದ ಗಣಪತಿ ವಿಗ್ರಹವನ್ನು ಮಾಡಿ: ಮನೆಯಲ್ಲಿ ಸುಲಭವಾಗಿ ಲಭ್ಯವಿರುವಂತಹ ಅರಶಿನದಿಂದಲೂ ಗಣೇಶನ ವಿಗ್ರಹವನ್ನು ತಯಾರಿಸಬಹುದು. ಇದಕ್ಕಾಗಿ ಅರಶಿನ ಮತ್ತು ಮೈದಾ ಇಲ್ಲವೇ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಬೆರೆಸಿ ಉಂಡೆಯನ್ನು ತಯಾರಿಸಿಟ್ಟುಕೊಳ್ಳಿ, ನಂತರ ಇದರಿಂದ ಸುಂದರವಾದ ಮೂರ್ತಿಯನ್ನು ತಯಾರಿಸಬಹುದು.




