ಬಾಲಿವುಡ್ (Bollywood) ದಿಗ್ಗಜ ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ಧರ್ಮೇಂದ್ರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ ಕೆಲ ಮಾಧ್ಯಮಗಳು ಧರ್ಮೆಂದ್ರ ನಿಧನ ಹೊಂದಿದ್ದಾರೆ ಎಂದು ಕೆಲ ಸಮಯದ ಮುಂಚೆಯೇ ವರದಿ ಪ್ರಸಾರ ಮಾಡಿದ್ದವು, ಇದನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಮಾನಿಗಳು ಶೋಕ ಸಂದೇಶ ಹಂಚಿಕೊಳ್ಳಲು ಆರಂಭಿಸಿದ್ದರು. ಆದರೆ ಈ ವಿಷಯ ಧರ್ಮೇಂದ್ರ ಕುಟುಂಬದವರಿಗೆ ತೀವ್ರ ನೋವುಂಟು ಮಾಡಿದೆ. ವಿಶೇಷವಾಗಿ ನಟಿ, ಸಂಸದೆ ಹೇಮಾಮಾಲಿನಿ ಅವರಂತೂ ಮಾಧ್ಯಮಗಳು, ಹಾಗೂ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
‘ಈ ರೀತಿ ನಡೆಯುತ್ತಿರುವುದು ಕ್ಷಮಿಸಲಾಗದು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವವನ್ನು ನೀಡಿ’ ಎಂದು ಹೇಮಾ ಮಾಲಿನಿ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ.





