ಹಿಂದೂಗಳ ಭಾವನೆಗೆ ದಕ್ಕೆ ಆರೋಪ; ನಿರ್ದೇಶಕ ರಾಜಮೌಳಿ ವಿರುದ್ಧ ಪ್ರಕರಣ ದಾಖಲು..!

Share with

ಹೈದರಾಬಾದ್‌(ತೆಲಂಗಾಣ): ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ವಿರುದ್ಧ ಹೈದರಾಬಾದ್‌ನ ಸರೂರ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಗ್ಲೋಬ್‌ ಟ್ರಾಟರ್ ಕಾರ್ಯಕ್ರಮದಲ್ಲಿ ಅವರು ಹನುಮಂತನ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ರಾಷ್ಟ್ರೀಯ ವಾನರಸೇನಾ ಸಂಘದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಲಾಕ್​ಬಸ್ಟರ್​ ಚಿತ್ರಗಳಾದ ‘ಬಾಹುಬಲಿ’, ‘ಆರ್​ಆರ್​ಆರ್’​ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಚಿತ್ರದ ಅದ್ಧೂರಿ ಕಾರ್ಯಕ್ರಮ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ‘ವಾರಣಾಸಿ’ ಎಂದು ಘೋಷಿಸಲಾಗಿತ್ತು. ಗ್ಲಿಂಪ್ಸ್ ರಿಲೀಸ್ ಸಂದರ್ಭದಲ್ಲಿ ತಾಂತ್ರಿಕ ದೋಷ ಸಂಭವಿಸಿ, ಕಾರ್ಯಕ್ರಮದಲ್ಲಿ ಸ್ವಲ್ಪ ಅಡಚಣೆಯಾಗಿತ್ತು. ಹಾಗಾಗಿ, ರಾಜಮೌಳಿ ಕೊಂಚ ಭಾವುಕರಾಗಿದ್ದರು.

ಆ ಸಂದರ್ಭದಲ್ಲಿ ಮಾತನಾಡುತ್ತಾ ಅವರು, ನಾನು ‘ದೇವರನ್ನು ನಂಬುವುದಿಲ್ಲ’ ಎಂದು ಹೇಳಿದ್ದರು. ಒಮ್ಮೆ ನನ್ನ ತಂದೆ ನನ್ನೊಂದಿಗೆ ಮಾತನಾಡುತ್ತಾ, ” ಹನುಮಂತ ನಮ್ಮ ಹಿಂದಿದ್ದು ಮುನ್ನಡೆಸುತ್ತಾನೆ’’ ಎಂದಿದ್ದರು. ಆದರೆ ಈ ಅಡೆತಡೆ ಸಂಭವಿಸಿದ ತಕ್ಷಣ ನನಗೆ ಕೋಪ ಬಂತು. ನನ್ನ ಪತ್ನಿ ಹನುಮಂತನನ್ನು ಪೂಜಿಸುತ್ತಾರೆ. ಅವರು ಹನುಮಂತನನ್ನು ಸ್ನೇಹಿತ ಎಂದು ಪರಿಗಣಿಸುತ್ತಾರೆ. ನನ್ನ ಪತ್ನಿ ಮೇಲೂ ನನಗೆ ಕೋಪ ಬಂತು. ಅವನು ಹೀಗೇಕೆ ಮಾಡಿದ? ಅಂತನ್ನಿಸಿತು ಎಂದು ದೊಡ್ಡ ವೇದಿಕೆಯಲ್ಲಿ ಹೇಳಿದ್ದರು.

ರಾಜಮೌಳಿ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದೀಗ ನಿರ್ದೇಶಕನ ವಿರುದ್ಧ ನೀಡಲಾದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *