ಅಕ್ಟೋಬರ್ 22 ರಂದು ತಮಿಳುನಾಡಿನ ಪೊಥಟ್ಟೂರ್ಪೆಟ್ಟೈ ಠಾಣೆಯ ಪೊಲೀಸರಿಗೆ, ತಿರುತ್ತಣಿ ಸರ್ಕಾರಿ ಶಾಲೆಯ ಲ್ಯಾಬ್ನ ಸಹಾಯಕ ಇ.ಪಿ.ಗಣೇಶ್ (56) ಅನ್ನೋರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಇ.ಪಿ ಗಣೇಶ್ ಪುತ್ರ ಜಿ ಮೋಹನ್ ರಾಜ್ (29) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ಆರಂಭಿಕ ಹಂತದಲ್ಲಿ ಆಕಸ್ಮಿಕ ಹಾವು ಕಡಿತದಿಂದಲೇ ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗಿತ್ತು.

ಮೃತಪಟ್ಟ ಕೆಲವು ದಿನಗಳು ಕಳೆದ ನಂತರ ಇ.ಪಿ.ಗಣೇಶ್ ಕುಟುಂಬವು ಇನ್ಶೂರೆನ್ಸ್ ಹಣಕ್ಕಾಗಿ ಅರ್ಜಿ ಸಲ್ಲಿಸಿತ್ತು. ಒಂದೆಲ್ಲ ಎರಡಲ್ಲ ಬರೋಬ್ಬರಿ ಮೂರು ಕೋಟಿಗಾಗಿ ಕುಟುಂಬದ ಸದಸ್ಯರು ಕ್ಲೈಮ್ ಮಾಡಿದ್ದರು. ಇದರಿಂದ ಅನುಮಾನಗೊಂಡ ಇನ್ಶೂರೆನ್ಸ್ ಕಂಪನಿ, ತಮಿಳುನಾಡಿನ ಉತ್ತರ ವಲಯದ ಪೊಲೀಸ್ ಮಹಾ ನಿರ್ದೇಶಕ ಆಸ್ರಾ ಗಾರ್ಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿತ್ತು.
ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುತ್ತಾರೆ. ಈ ತನಿಖಾ ತಂಡವು ಇ.ಪಿ.ಗಣೇಶ್ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತದೆ. ತನಿಖೆ ವೇಳೆ ಕುಟುಂಬವು ವಿವಿಧ ಮೂಲಗಳಿಂದ ಸಾಲ ಮಾಡಿರುವ ಸುಳಿವು ಸಿಗುತ್ತದೆ. ಜೊತೆಗೆ ಕುಟುಂಬವು ಭಾರೀ ಮೌಲ್ಯದ ವಿಮಾ ಪಾಲಿಸಿಯನ್ನೂ ಪಡೆದಿರೋದು ಗೊತ್ತಾಗುತ್ತದೆ. ಕುಟುಂಬದ ಆದಾಯದ ಮೂಲ ಹಾಗೂ ವಿಮಾ ಪಾಲಿಸಿಯ ಮೊತ್ತಗಳನ್ನು ಗಮನಿಸಿದಾಗ ತನಿಖಾಧಿಕಾರಿಗಳಿಗೆ ಅನುಮಾನ ಕಾಡುತ್ತದೆ.
ಇದೇ ಕಾರಣಕ್ಕೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಇ.ಪಿ.ಗಣೇಶ್ ಇಬ್ಬರು ಮಕ್ಕಳಾದ ಮೋಹನ್ ರಾಜ್ ಮತ್ತು ಹರಿಹರನ್, ವಿಮಾ ಹಣ ಪಡೆಯುವ ಉದ್ದೇಶದಿಂದ ತಂದೆಯನ್ನು ಹತ್ಯೆ ಮಾಡಿರುವ ಸತ್ಯವನ್ನು ಬಾಯಿಬಿಟ್ಟಿದ್ದಾರೆ.
ಅಪ್ಪನ ಸಾಯಿಸಿ ಮೂರು ಕೋಟಿ ವಿಮಾ ಹಣ ಪಡೆಯಲು ಇಬ್ಬರು ಮಕ್ಕಳು ಸಖತ್ತಾಗಿಯೇ ಪ್ಲಾನ್ ಮಾಡಿದ್ದರು. ಮನವೂರಿನ ಜಿ ಬಾಲಾಜಿ (28), ಬಿ ಪ್ರಶಾಂತ್ (35), ಮೋಸರು ಗ್ರಾಮದ ಎಸ್.ದಿನಕರ್ (45), ಮನವೂರಿನ ಜಿ.ನವೀನ್ ಕುಮಾರ್ (28) ಅನ್ನೋರ ಸಹಾಯ ಪಡೆದಿದ್ದಾರೆ. ಈ ಆರೋಪಿಗಳು, ಇ.ಪಿ ಗಣೇಶ್ಗೆ ಹಾವು ಕಚ್ಚುವಂತೆ ಸೀನ್ ಕ್ರಿಯೇಟ್ ಮಾಡಿದ್ದಾರೆ.
ಹಾವು ಕಚ್ಚಿಸುವ ಮೊದಲು ಆರೋಪಿ ದಿನಕರ್, ಒಂದು ವಾರದ ಹಿಂದೆಯೇ ಹಾವಿನ ವ್ಯವಸ್ಥೆ ಮಾಡಿದ್ದ. ಮೊದಲ ಪ್ರಯತ್ನದಲ್ಲಿ ಇ.ಪಿ.ಗಣೇಶ್ ಅವರ ಕಾಲಿಗೆ ಹಾವು ಕಚ್ಚುವಂತೆ ಮಾಡಲಾಗಿತ್ತು. ಈ ಪ್ರಯತ್ನದಲ್ಲಿ ಅವರು ಯಶಸ್ವಿ ಆಗಲಿಲ್ಲ. ಹೀಗಾಗಿ ಒಂದು ದಿನ ಬೆಳಗಿನ ಜಾವ ಕೈಟ್ ಹಾವನ್ನು ಇಪಿ ಗಣೇಶ್ ಅವರ ಕುತ್ತಿಗೆ ಮೇಲೆ ಬಿಟ್ಟಿದ್ದರು. ಈ ವೇಳೆ ಹಾವು ಆತನ ಕಚ್ಚಿ ಸಾಯಿಸಿದೆ. ಹಾವು ಕಚ್ಚುತ್ತಿದ್ದಂತೆಯೇ, ಬಾಲಾಜಿ ಮತ್ತು ಪ್ರಶಾಂತ್ ಅನ್ನೋರು ವ್ಯವಸ್ಥಿತ ಸಂಚಿನಂತೆ ಮನೆಯೊಳಗೆ ಹಾವನ್ನು ಬಡಿದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಕೋಟಿಗಾಗಿ ಅಪ್ಪನ ಮುಗಿಸಿದರು
ಪ್ರಕರಣ ಸಂಬಂಧ ಆರೋಪಿಗಳಾದ ಹರಿಹರನ್, ಮೋಹನ್ ರಾಜ್, ಬಾಲಾಜಿ, ಪ್ರಶಾಂತ್, ದಿನಕರನ್, ನವೀನ್ ಕುಮಾರ್ನನ್ನು ಪೊಲೀಸರು ಬಂಧಿಸಲಾಗಿದೆ. ನಮ್ಮ ವಿಶೇಷ ತನಿಖಾ ತಂಡವು ಅತಿದೊಡ್ಡ ಸತ್ಯವನ್ನು ಬಯಲಿಗೆ ಎಳೆದಿದೆ ಎಂದಯ ಅಧಿಕಾರಿ ಶ್ರೀ ಶುಕ್ಲಾ ತಿಳಿಸಿದ್ದಾರೆ.




