ಬೆಂಗಳೂರು, ಡಿ.26: ಬೆಂಗಳೂರಿನಲ್ಲಿ (Bengaluru) ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಬುಧವಾರ (ಡಿ.24) ರಾತ್ರಿ ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ನಲ್ಲಿ ಒಂದು ಎಸ್ಯುವಿ ಕಾರೊಂದು ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗಿದೆ. ಕಾರಿನ ಮುಂದೆ ಒಂದು ಬುಲೆಟ್ ಬೈಕ್ ಸಿಲುಕಿಕೊಂಡು ಅದನ್ನು ರಸ್ತೆ ಉದ್ದಕ್ಕೂ ಎಳೆದುಕೊಂಡು ಹೋಗಿದೆ. ಇದನ್ನು ನೋಡಿ ಇತರ ಸವಾರರು ಅಚ್ಚರಿಗೊಂಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನ ಪಕ್ಕದಲ್ಲಿದ್ದ ಮತ್ತೊಂದು ಕಾರಿನರು ಎಷ್ಟೇ ಎಚ್ಚರಿಕೆ ನೀಡಿದ್ರು ಅದನ್ನು ಕೇಳಿಕೊಳ್ಳದೇ ಸುಮಾರು 500 ಮೀಟರ್ಗಳ ವರೆಗೆ ಬುಲೆಟ್ ಬೈಕ್ನ್ನು ಎಳೆದುಕೊಂಡು ಹೋಗಿದ್ದಾರೆ. ಇದರಿಂದ ಕಾರಿನ ಕೆಳಗಿನಿಂದ ಬೆಂಕಿ ಕಿಡಿಗಳು ಬಂದಿದೆ. ಈ ಘಟಮನೆಯಿಂದ ಜನನಿಬಿಡ ಪ್ರದೇಶದಲ್ಲಿ ಭೀತಿ ಉಂಟು ಮಾಡಿದೆ.
ಕೊನೆಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಕೋಪಗೊಂಡ ಇತರ ಪ್ರಯಾಣಿಕರು ಎಸ್ಯುವಿ ಕಾರು ಹಾಗೂ ಡ್ರೈವರ್ನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಈ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕುಣಿಗಲ್ನ ಶ್ರೀನಿವಾಸ್ ಕೆವಿ ಎಂದು ಗುರುತಿಸಲಾಗಿದೆ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ, ಈ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ರಸ್ತೆ ಉದ್ದಕ್ಕೂ ಬೈಕ್ನ್ನು ಎಳೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ದೂರಿನ ಪ್ರಕಾರ, ಶ್ರೀನಿವಾಸ್ ಅವರು ಬೈಕ್ ಓಡಿಸುತ್ತಿದ್ದ ರೋಹಿತ್ ಎಸ್ ಅವರ ಬುಲೆಟ್ಗೆ ಹಿಂಭಾಗದಿಂದ ಡಿಕ್ಕಿ ಹೊಡೆದು ರಸ್ತೆ ಉದ್ದಕ್ಕೂ ಎಳೆದುಕೊಂಡು ಬಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ಬಗ್ಗೆ ಬೈಕ್ ಸವಾರ ದೂರಿನಲ್ಲಿ ಹೀಗೆ ಹೇಳಿದ್ದಾರೆ. “ನನ್ನ ಬೈಕ್ಗೆ ಡಿಕ್ಕಿ ಹೊಡೆದು ನನ್ನನ್ನು ಕೆಳಗೆ ಹಾಕಿ, ಬುಲೆಟ್ನ್ನು ರಸ್ತೆಯಲ್ಲಿ ಎಳೆದುಕೊಂಡು ಬಂದಿದ್ದಾರೆ” ಎಂದು ಹೇಳಿದ್ದಾರೆ. ಈ ಅಪಘಾತದಿಂದ ರೋಹಿತ್ ಅವರಿಗೆ ಯಾವುದೇ ತೊಂದರೆಗಳು ಆಗಿಲ್ಲ. ಬೈಕ್ಗೆ ದೊಡ್ಡ ಮಟ್ಟದ ಡ್ಯಾಮೆಜ್ ಆಗಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸ್ ತನಿಖೆಯಲ್ಲಿ ಶ್ರೀನಿವಾಸ್ ಅವರು ಮದ್ಯಪಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಡಿಕ್ಕಿಯ ನಂತರ ಭಯಭೀತನಾಗಿದ್ದೆ, ತನ್ನ ಕಾರಿನ ಮುಂದೆ ಬೈಕ್ ಸಿಲುಕಿಕೊಂಡಿದೆ ಎಂಬ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕರು ಶ್ರೀನಿವಾಸ್ ಅವರ ಈ ಹುಚ್ಚುತನಕ್ಕೆ ಕಾರನ್ನು ಪುಡಿಪುಡಿ ಮಾಡಿ, ಶ್ರೀನಿವಾಸ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.




