ನವದೆಹಲಿ, ಜನವರಿ 14: ಚೆನ್ನೈ, ಜನವರಿ 14: ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ ಭಾರತದ ಮಹಿಳೆಯರು ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಹೇಳಿಕೆ ನೀಡಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೆನ್ನೈ ಸೆಂಟ್ರಲ್ನಿಂದ 4 ಬಾರಿ ಸಂಸದರಾಗಿರುವ ದಯಾನಿಧಿ ಮಾರನ್ (Dayanidhi Maran) ಇಂದು ಸರ್ಕಾರಿ ಮಹಿಳಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ, ಉತ್ತರ ಭಾರತದಲ್ಲಿ ಮಹಿಳೆಯರನ್ನು ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳನ್ನು ಹೆರಲು ಸೀಮಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
“ನಮ್ಮ ಹುಡುಗಿಯರು ಲ್ಯಾಪ್ಟಾಪ್ನೊಂದಿಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದಿರಬೇಕು. ನೀವು ಸಂದರ್ಶನಕ್ಕೆ ಹಾಜರಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲಿ ನಿಮ್ಮಲ್ಲಿ ಆ ಆತ್ಮವಿಶ್ವಾಸ ಖಂಡಿತ ಇದೆ. ಇಲ್ಲಿ ನಾವು ಹುಡುಗಿಯರಿಗೆ ಹೆಚ್ಚೆಚ್ಚು ಓದಲು ಮತ್ತು ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಹುಡುಗಿಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರುವುದು ಮಾತ್ರ ನಿಮ್ಮ ಕೆಲಸ ಎಂದು ಹೇಳಲಾಗುತ್ತದೆ” ಎಂದು ದಯಾನಿಧಿ ಮಾರನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
“ಇಲ್ಲಿನ ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಏಕೆಂದರೆ ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್ನಲ್ಲೂ ಶಿಕ್ಷಣ ಪಡೆದಿದ್ದಾರೆ. ಸರ್ಕಾರವು ಮಹಿಳೆಯರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತದೆ” ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.





