ಖಾಲಿ ಟ್ರಂಕ್ ಹಿಡಿದು ಬಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಸಂಕಷ್ಟ

Share with

ಬೆಂಗಳೂರು, ಫೆಬ್ರವರಿ 18: ನಮ್ಮ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ವಿಚಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇತ್ತೀಚೆಗೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. ಕೊನೆಗೆ ಮೆಟ್ರೋ ಟಿಕೆಟ್ ಪ್ರಯಾಣ ದರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು. ಆದರೆ ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಾಯಿಸ್ತಿದೆ ಅಂತಾ ಆರೋಪಿಸಿ ಖಾಲಿ ಟ್ರಂಕ್ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಇದೀಗ ಪೊಲೀಸರಿಂದ ಖಾಸಗಿ ದೂರು ದಾಖಲಾಗಿದೆ. ಈ ಸಂಬಂಧ ತೇಜಸ್ವಿ ಸೂರ್ಯ ಸೇರಿ ಒಂಭತ್ತು ಜನರಿಗೆ 42ನೇ ಎಸಿಜೆಎಂ ಕೋರ್ಟ್ನಿಂದ ನೋಟಿಸ್ ಜಾರಿ ಮಾಡಲಾಗಿದೆ.

9 ಜನರಿಗೆ ನೋಟಿಸ್
ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸಿದ್ದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆ ಇನ್ಸ್ಪೆಕ್ಟರ್ ಆರ್.ದೀಪಕ್ರಿಂದ ಖಾಸಗಿ ದೂರು ನೀಡಲಾಗಿದೆ. ಖಾಸಗಿ ದೂರು ಸಂಬಂಧ ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸೇರಿ 9 ಜನರಿಗೆ 42ನೇ ಎಸಿಜೆಎಂ ಕೋರ್ಟ್ನಿಂದ ನೋಟಿಸ್ ನೀಡಲಾಗಿದೆ.

ಮೆಟ್ರೋ ಟಿಕೆಟ್ ಪ್ರಯಾಣ ದರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಾಯಿಸಿದೆ ಅಂತಾ ಆರೋಪಿಸಿರುವ ಸಂಸದ ತೇಜಸ್ವಿ ಸೂರ್ಯ, ಇತ್ತೀಚೆಗೆ ವಿಭಿನ್ನವಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಬೆಂಗಳೂರಿನ ಆರ್‌.ವಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಖಾಲಿ ಟ್ರಂಕ್ ಪ್ರದರ್ಶಿಸಿದ್ದರು. ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರವೇ ದರ ಏರಿಕೆ ಸಮಿತಿಗೆ ಒತ್ತಾಯಿಸಿದೆ ಅಂತಾ ಕಿಡಿಕಾರಿದ್ದರು.

ಇನ್ನೂ ಪ್ರತಿಭಟನೆ ಮಾಡದಂತೆ ತೇಜಸ್ವಿ ಸೂರ್ಯಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಕಿಡಿಕಾರಿದ್ದ ಸಂಸದ, ನಾನು ಪ್ರತಿಭಟನೆ ಮಾಡಿಲ್ಲ. ಖಾಲಿ ಟ್ರಂಕ್ ಹಿಡಿದುಕೊಂಡು ಮೆಟ್ರೋದಲ್ಲಿ ಹೋಗುತ್ತಿದ್ದೆ. ನನಗೆ ನೋಟಿಸ್ ಕೊಡುತ್ತೀರಾ ಅಂತಾ ಗುಡುಗಿದ್ದರು. ಬಳಿಕ ತೇಜಸ್ವಿ ಸೂರ್ಯರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.


Share with

Leave a Reply

Your email address will not be published. Required fields are marked *