ಹುಬ್ಬಳ್ಳಿ ಮತ್ತೆ ಲವ್ ಜಿಹಾದ್: ಬಲೆಯಿಂದ ಪಾರಾಗಿ ಅಸಲಿ ಕಹಾನಿ ಬಿಚ್ಚಿಟ್ಟ ಸಂತ್ರಸ್ತೆಯರು

Share with

ಹುಬ್ಬಳ್ಳಿ, ಮಾರ್ಚ್ 05: ಲವ್ ಜಿಹಾದ್ (Love Jihad) ಕಥೆಯುಳ್ಳ ಸಿನಿಮಾವೊಂದು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ಹೇಗೆ ಮಾಡಲಾಗುತ್ತಿದೆ ಅನ್ನೋದರ ಬಗ್ಗೆ ಎರಡು ಭಾಗಗಳಲ್ಲಿ ಸಿನಿಮಾ ತೆರೆಕಂಡಿದೆ. ಆದರೆ ರಾಜ್ಯದಲ್ಲಿ ಕೂಡ ಇದೇ ರೀತಿ ಲವ್ ಜಿಹಾದ್ ಹತ್ತಾರು ಪ್ರಕರಣಗಳು ನಡೆಯುತ್ತಿರುವ ಆರೋಪಗಳು ಮೇಲಿಂದ ಮೇಲೆ ಕೇಳಿ ಬರ್ತಿವೆ. ಇಂದು ಹುಬ್ಬಳ್ಳಿಯಲ್ಲಿ ಅನೇಕರು ತಾವು ಹೇಗೆ ಲವ್ ಜಿಹಾದ್ ಬಲೆಯಲ್ಲಿ ಬಿದ್ದೆವು. ಅದರಿಂದ ಪಾರಾಗಿ ಬಂದಿದ್ದು ಹೇಗೆ ಅಂತ ನೋವು ತೋಡಿಕೊಂಡರು. ಇನ್ನೊಂದಡೆ ಲವ್ ಜಿಹಾದ್ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ನೋವು ತೋಡಿಕೊಂಡ ಸಂತ್ರಸ್ತೆಯರು
ಕೇರಳದಲ್ಲಿ ನಡೆದಿವೆ ಅಂತ ಹೇಳಲಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಕಳೆದ ವರ್ಷ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದರ ಎರಡನೇ ಭಾದ ಕೂಡ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಇಂದು ಹುಬ್ಬಳ್ಳಿಯಲ್ಲಿ ಅನೇಕ ಯುವತಿಯರು, ತಮ್ಮನ್ನು ಕೂಡ ಲವ್ ಜಿಹಾದ್ ಬಲೆಯೊಳಗೆ ಕೆಡವಲಾಗಿತ್ತು. ಅಲ್ಲಿ ತಾವು ಪಟ್ಟ ಕಷ್ಟಗಳೇನು, ಅಲ್ಲಿಂದ ಪಾರಾಗಿದ್ದು ಹೇಗೆ ಅಂತ ಹೇಳಿಕೊಂಡಿದ್ದಾರೆ. ಉಮ್ಮಳಿಸಿ ಬರ್ತಿರೋ ದುಖವನ್ನು ಸಹಿಸಿ ತಮಗಾದ ನೋವನ್ನು ಹಂಚಿಕೊಂಡರು.

ಬಣ್ಣದ ಮಾತಿನಿಂದ ಮರಳು ಮಾಡುತ್ತಾರೆ: ಸಂತ್ರಸ್ತೆ
ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಅನೇಕರು, ಲವ್ ಜಿಹಾದ್ ಬಗ್ಗೆ ಹೇಳಿಕೊಂಡರು. ತಮಗೆ ಪರಿಚಯವಾದ ಅನ್ಯ ಧರ್ಮೀಯರು, ನನ್ನನ್ನು ಮದುವೆಯಾದರೆ ನೀನು ಮತಾಂತರವಾಗೋ ಅವಶ್ಯಕತೆಯಿಲ್ಲ. ಬುರ್ಖಾ ಹಾಕೋದು ಕೂಡ ಇಲ್ಲ. ನೀನು ರಾಣಿಯಂತೆ ಚೆನ್ನಾಗಿರ್ತಿಯಾ ಅಂತ ಹೇಳಿ ಮನಸು ಕೆಡಿಸುತ್ತಿದ್ದರು. ನಮ್ಮ ಹೆತ್ತವರನ್ನು, ನಮ್ಮ ಮನೆಯವರನ್ನು ನಾವೇ ದ್ವೇಷಿಸುವಂತೆ ಬಣ್ಣದ ಮಾತುಗಳನ್ನು ಹೇಳ್ತಿದ್ದರು. ಆದರೆ ನಂತರ ಗೊತ್ತಾಗಿದ್ದು, ಹೇಳಿದ್ದೆಲ್ಲಾ ಬಣ್ಣದ ಮಾತುಗಳು ಅಂತ. ಹೀಗಾಗಿ ಲವ್ ಜಿಹಾದ್ ಬಲೆಯಿಂದ ಪಾರಾಗಿ ಬಂದರು ಅಂತ ತಮ್ಮೋ ತಮ್ಮ ನೋವನ್ನು ಹೇಳಿಕೊಂಡರು.

ಇನ್ನು ಹುಬ್ಬಳ್ಳಿಯಲ್ಲಿ ಈ ಹಿಂದೆ ಕಾಲೇಜು ಕ್ಯಾಂಪಸ್ನಲ್ಲಿ ಹತ್ಯೆಯಾದ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಕೂಡ ಭಾಗಿಯಾಗಿದ್ದರು. ಲವ್ ಜಿಹಾದ್ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಮಗಳನ್ನು ಕೊಂದವರಿಗೆ ಇಂದು ಜೈಲಿನಲ್ಲಿ ವಿವಿಐಪಿ ಆತಿಥ್ಯ ಸಿಗ್ತಿದೆ. ಅವರಿಗೆ ಬಿರಿಯಾನಿ ಕೊಡ್ತಿದ್ದಾರೆ. ನೇಹಾ ಹಿರೇಮಠ ಹತ್ಯೆಯಾದಾಗ ಮನೆಗೆ ಅನೇಕ ರಾಜಕಾರಣಿಗಳು ಬಂದು ನೂರು ದಿನದಲ್ಲಿ ನ್ಯಾಯ ಕೊಡಿಸ್ತೇವೆ ಅಂತ ಹೇಳಿದ್ರು. ಆದರೆ ಎರಡು ವರ್ಷವಾದರೂ ಕೂಡ ನ್ಯಾಯ ಸಿಕ್ಕಿಲ್ಲ. ಆರೋಪಿ ಬೆನ್ನಿಗೆ ಅನೇಕರು ನಿಂತಿದ್ದಾರೆ. ಹೀಗಾಗಿ ತಮ್ಮ ಮಗಳ ಹತ್ಯೆ ಪ್ರಕರಣವನ್ನು ಎನ್ಐಎ ಇಲ್ಲವೇ ಸಿಬಿಐಗೆ ನೀಡಬೇಕು ಅಂತ ಆಗ್ರಹಿಸಿದರು.

ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು: ಮುತಾಲಿಕ್ ಆಗ್ರಹ
ಇನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಮಕ್ಕಳು ಮತ್ತು ಯುವತಿಯರು ಕಾಣೆಯಾಗ್ತಿದ್ದಾರೆ. ಕಾಣೆಯಾಗ್ತಿರೋರಲ್ಲಿ ಕೆಲವರು ಪತ್ತೆಯಾಗಿಲ್ಲ. ಹಾಗಾದರೆ ಅವರು ಎಲ್ಲಿ ಹೋಗ್ತಿದ್ದಾರೆ ಅಂತ ಪ್ರಶ್ನೆ ಮಾಡಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯ ಮತ್ತು ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಣೆಯಾಗ್ತಿರೋರನ್ನು ಲವ್ ಜಿಹಾದ್ಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಅಂತ ಆಗ್ರಹಿಸಿದರು.

ಅನೇಕ ಮುಸ್ಲಿಂರು ತಮ್ಮ ಹೆಸರನ್ನು ಹೇಳದೆ, ಹಿಂದೂಗಳ ಹೆಸರನ್ನು ಹೇಳಿ ಲವ್ ಜಿಹಾದ್ ಮಾಡ್ತಿದ್ದಾರೆ. ಲವ್ ಜಿಹಾದ್ ಹಿಂದೆ ಕೇವಲ ಪ್ರೀತಿ, ಪ್ರೇಮ ಮಾತ್ರವಿಲ್ಲ, ಬದಲಾಗಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರವಿದೆ ಅಂತ ಆರೋಪಿಸಿದರು.

ಲವ್ ಜಿಹಾದ್ ಪ್ರಕರಣಗಳು ಆಗಾಗ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡ್ತಿವೆ. ಆದರೆ ಪ್ರೀತಿಸಿ ಮದುವೆಯಾಗಿರೋ ಅಂತರಧರ್ಮೀಯ ಅನೇಕ ಜೋಡಿಗಳು ಅನೋನ್ಯವಾಗಿವೆ. ಅನೇಕರ ಸಂಸಾರ ಹಾಳಾಗಿವೆ. ಇದರ ಹಿಂದೆ ನಿಜವಾಗಿಯೂ ಲವ್ ಜಿಹಾದ್ ಇದೆಯಾ, ಅಥವಾ ಅದು ಪ್ರೀತಿನಾ ಅನ್ನೋದು ಮಾತ್ರ ತನಿಖೆಯಿಂದ ಗೊತ್ತಾಗಬೇಕಿದೆ.


Share with

Leave a Reply

Your email address will not be published. Required fields are marked *