ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಮೃತ್ಯು, ನಾಲ್ವರಿಗೆ ಗಾಯ

Share with

ಗುರುಗ್ರಾಮ: ಇಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಒಳಚರಂಡಿ ಸಂಸ್ಕರಣಾ ಘಟಕದ (STP) ಕಾಮಗಾರಿ ನಡೆಯುತ್ತಿದ್ದ ವೇಳೆ ಹಠಾತ್ತಾಗಿ ಮಣ್ಣಿನ ದಿಬ್ಬ ಕುಸಿದು ಬಿದ್ದ ಪರಿಣಾಮ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಗುರುಗ್ರಾಮದ ಸಿದ್ರಾವಲಿ ಪ್ರದೇಶದ ‘ಸಿನ್ನೇಚರ್ ಗ್ಲೋಬಲ್ ಸೊಸೈಟಿ’ ಎಂಬಲ್ಲಿ ಸೋಮವಾರ ಸಂಜೆ ಈ ದುರಂತ ನಡೆದಿದೆ. ಕಾರ್ಮಿಕರು ನೆಲಮಟ್ಟದಿಂದ ಸುಮಾರು ಹಲವಾರು ಅಡಿಗಳಷ್ಟು ಆಳದಲ್ಲಿ ಕೆಲಸ ಮಾಡುತ್ತಿದ್ದಾಗ, ಮೇಲಿದ್ದ ಬೃಹತ್ ಮಣ್ಣಿನ ದಿಬ್ಬವು ಅವರ ಮೇಲೆ ಕುಸಿದು ಬಿದ್ದಿದೆ. ಸುಮಾರು 12 ರಿಂದ 15 ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಡಿಎಸ್‌ಪಿ ಯೋಗೇಶ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ

ಘಟನೆ ನಡೆದ ತಕ್ಷಣ ಬಿಲಾಸ್‌ಪುರ ಪೊಲೀಸ್ ತಂಡ, ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಮಣ್ಣಿನ ಅಡಿಯಿಂದ ಕಾರ್ಮಿಕರನ್ನು ಹೊರತೆಗೆದು ರಾಜಸ್ಥಾನದ ಭಿವಾಡಿಯಲ್ಲಿರುವ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತರನ್ನು ಶಿವಶಂಕರ್, ಪರಮೇಶ್ವರ್ ಮಹತೋ, ಮಂಗಲ್ ಮಹತೋ, ಭಗೀರಥ ಗೋಪ್, ಸತೀಶ್, ಸಂಜೀವ್ ಗೋಪ್ ಮತ್ತು ಧನಂಜಯ್ ಮಹತೋ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ನೇಪಾಳ ಮೂಲದ ಇಂದ್ರಜಿತ್, ಛೋಟೇಲಾಲ್, ಶಿವಕಮ್ ಚೌಧರಿ ಹಾಗೂ ದೀನ್ ದಯಾಳ್ ಶರ್ಮಾ ಎಂದು ಗುರುತಿಸಲಾಗಿದೆ.

50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಘಟನೆಯಿಂದ ಆಕ್ರೋಶಗೊಂಡಿರುವ ಮೃತರ ಕುಟುಂಬಸ್ಥರು, ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಕಾರ್ಮಿಕರ ಕುಟುಂಬಸ್ಥರು ಬಂದ ನಂತರ ದೂರು ದಾಖಲಿಸಿಕೊಂಡು, ನಿರ್ಮಾಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *