ಕುಂಬಳೆ: ಪಯ್ಯನ್ನೂರಿನ ಆಸ್ಪತ್ರೆಯೊಂದರ ತ್ಯಾಜ್ಯಗಳನ್ನು ಅನಂತಪುರದಲ್ಲಿ ಎಸೆದಿರುವುದು ಇದೀಗ ಪತ್ತೆಯಾಗಿದೆ.

ಅನಂತಪುರ ಶ್ರೀ ಅನಂತಪದ್ಮನಾಭಸ್ವಾಮಿ ಕ್ಷೇತ್ರಕ್ಕಿರುವ ರಸ್ತೆಯಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಕಂಡುಬಂದಿತ್ತು. ಇದು ಗಮನಕ್ಕೆ ಬಂದ ಪುತ್ತಿಗೆ ಪಂಚಾಯತ್ನ ಹನ್ನೊಂದನೇ ವಾರ್ಡ್ ಸದಸ್ಯ ಸತೀಶ್ ಪಂಚಾಯತ್ನ ನೌಕರರನ್ನು ಸ್ಥಳಕ್ಕೆ ತಲುಪಿಸಿ ಗೋಣಿ ತೆರೆದು ನೋಡಿದಾಗ ಅದರಲ್ಲಿ ಪಯ್ಯನ್ನೂರಿನ ಬಿ.ಕೆ.ಎಂ. ಆಸ್ಪತ್ರೆಯ ರಶೀದಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ವಿಚಾರಿಸಿದಾಗ ಅಲ್ಲಿಂದ ತ್ಯಾಜ್ಯ ಕೊಂಡೊಯ್ದ ತಂಡದ ಕುರಿತು ಮಾಹಿತಿ ಲಭಿಸಿದೆ. ಬಳಿಕ ಅದೇ ತಂಡವನ್ನು ಪತ್ತೆಹಚ್ಚಿ ಅನಂತಪುರಕ್ಕೆ ತಲುಪಿಸಿ ತ್ಯಾಜ್ಯವನ್ನು ಅವರಿಂದಲೇ ತೆರವುಗೊಳಿಸಲಾಯಿತು. ಮಾತ್ರವಲ್ಲ ಇನ್ನುಮುಂದೆ ತ್ಯಾಜ್ಯಗಳನ್ನು ಇಲ್ಲಿಗೆ ತಂದು ಉಪೇಕ್ಷಿಸದಂತೆ ನಾಗರಿಕರು ತಂಡಕ್ಕೆ ತಾಕೀತು ನೀಡಿದ್ದಾರೆ.




