ಕೇರಳದಲ್ಲಿ ಯುಡಿಎಫ್ ಮೈತ್ರಿಕೂಟ ಭಾರೀ ಬಹುಮತ ಪಡೆದ ಹೊರತಾಗಿಯೂ ಮುಖ್ಯಮಂತ್ರಿ ಘೋಷಣೆ ಮಾಡುವಲ್ಲಿ ಕಾಂಗ್ರೆಸ್ ವಿಳಂಬ ಧೋರಣೆ ತೋರಿದ್ದು ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೇರಳದ ಮೂವರು ಪ್ರಬಲ ನಾಯಕರ ನಡುವಿನ ತೀವ್ರ ಪೈಪೋಟಿ ಕಾಂಗ್ರೆಸ್ ಹೈಕಮಾಂಡ್ ನ ತಲೆ ನೋವಿಗೆ ಕಾರಣವಾಗಿತ್ತು.

ಕೊನೆಗೂ ಅಳೆದು ತೂಗಿ ಅನುಭವಿ ನಾಯಕ ವಿ.ಡಿ. ಸತೀಶನ್ ಅವರಿಗೆ ಮುಖಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹೈಕಮಾಂಡ್ ವಲಯದಲ್ಲಿ ಅಪಾರ ಪ್ರಭಾವ ಹೊಂದಿದ್ದ ಸಂಸದ ಕೆ.ಸಿ.ವೇಣುಗೋಪಾಲ್ ಅವರು ತ್ಯಾಗ ಮಾಡಿದ್ದಾರೆ. ಮತ್ತೊಬ್ಬ ನಾಯಕ ರಮೇಶ್ ಚೆನ್ನಾತ್ತಿಲ ಅವರನ್ನು ಹಿಂದಿಕ್ಕಿ ಸತೀಶನ್ ಅವಕಾಶ ತನ್ನದಾಗಿಸಿಕೊಂಡಿದ್ದಾರೆ.
ಸತೀಶನ್ ರಾಜಕೀಯ ಹಾದಿ
1964 ಜನನ 31 ರಂದು ಕೆ.ದಾಮೋದರ ಮೆನನ್ ಮತ್ತು ವಿ.ವಿಲಾಸಿನಿ ಅಮ್ಮ ಅವರ ಪುತ್ರನಾಗಿ ಜನಿಸಿದ್ದ ವಡಕ್ಕೇರಿ ದಾಮೋದರನ್ ಸತೀಶನ್ ವೃತ್ತಿಯಲ್ಲಿ ವಕೀಲರು. 2001 ರಿಂದ ಪರವೂರು ವಿಧಾನಸಭಾ ಕ್ಷೇತ್ರದಿಂದ ನಿರಂತರ ಶಾಸಕರಾಗಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಕೇರಳದ ಪ್ರಬಲ ನಾಯರ್ ಸಮುದಾಯಕ್ಕೆ ಸೇರಿದ ಸತೀಶನ್ ಅವರು ಈ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಮುನ್ನಡೆಸಿದ್ದರು.
ವಿದ್ಯಾವಂತ ರಾಜಕಾರಣಿ
ಸತೀಶನ್ ಅವರು ರಾಜಗಿರಿ ಸಮಾಜ ವಿಜ್ಞಾನ ಕಾಲೇಜಿನಿಂದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ (MSW) ಪಡೆ ನಂತರ ಅವರು ಕೇರಳ ಕಾನೂನು ಅಕಾಡೆಮಿ ಕಾನೂನು ಕಾಲೇಜಿನಿಂದ ಕಾನೂನು ಪದವಿ (LLB) ಮತ್ತು ತಿರುವನಂತಪುರಂನ ಸರಕಾರಿ ಕಾನೂನು ಕಾಲೇಜಿನಿಂದ ಕಾನೂನು ಸ್ನಾತಕೋತ್ತರ ಪದವಿ (LLM) ಪಡೆದ ವಿದ್ಯಾವಂತ ರಾಜಕಾರಣಿ. 10 ವರ್ಷಗಳ ಕಾಲ, ಸತೀಶನ್ ಕೇರಳ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸಿದ ಅನುಭವದೊಂದಿಗೆ ಅವರ ಭಾಷಾ ಹಿಡಿತವೂ ಅತ್ಯುತ್ತಮವಾಗಿದೆ.
ಮೊದಲ ಚುನಾವಣೆಯಲ್ಲಿ ಸೋಲು
1996 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸತೀಶನ್ ಅವರ ರಾಜಕೀಯ ಪ್ರವೇಶ ಕಮ್ಯುನಿಸ್ಟ್ ಭದ್ರಕೋಟೆ ಪರಾವೂರ್ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಪಿ. ರಾಜು ವಿರುದ್ಧ ಸೋಲಿನೊಂದಿಗೆ ಆರಂಭವಾಯಿತು. ಛಲ ಬಿಡದೆ ಮುಂದಿನ ಚುನಾವಣೆಯಲ್ಲಿ 2001 ರಲ್ಲಿ ಜಯ ಸಾಧಿಸಿ ಮೊದಲ ಬಾರಿಗೆ ಶಾಸಕರಾದರು. ಆ ಬಳಿಕ ಕ್ಷೇತ್ರದಲ್ಲಿ ನಿರಂತರವಾಗಿ ಜಯ ಸಾಧಿಸುತ್ತಲೇ ಇದ್ದಾರೆ. 2021 ರಲ್ಲಿ 15 ನೇ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿ, ಸತೀಶನ್ ಅವರು ಯುಡಿಎಫ್ ಮೈತ್ರಿಕೂಟವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು,140 ಸದಸ್ಯ ಬಲದ ವಿಧಾನಸಭೆಯಲ್ಲಿ 102 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಗಳಿಸುವ ಮೂಲಕ ಎಲ್ ಡಿಎಫ್ ನ ಹತ್ತು ವರ್ಷಗಳ ಆಡಳಿತ ಕೊನೆಗೊಳಿಸುವಲ್ಲಿ ಶ್ರಮಿಸಿದರು. ಸತತ ಆರನೇ ಬಾರಿಗೆ ಪರವೂರು ಕ್ಷೇತ್ರದಿಂದ ಸ್ಪರ್ಧಿಸಿ 20,600 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.
ಆರ್. ಲಕ್ಷ್ಮಿ ಪ್ರಿಯಾ ಅವರನ್ನು ವಿವಾಹವಾದ ಸತೀಶನ್ ದಂಪತಿಗೆ ಉನ್ನಿಮಯಾ ಎಂಬ ಪುತ್ರಿ ಇದ್ದಾರೆ.




