ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿಗಳು ರೋಗಿಗಳೊಂದಿಗೆ ಕನ್ನಡದಲ್ಲೇ ವ್ಯವಹರಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಅಧೀಕ್ಷಕ ಡಾ| ಶಿವಪ್ರಕಾಶ್ ಸೂಚನೆ ನೀಡಿದ್ದಾರೆ.

ದಕ್ಷಿಣಕನ್ನಡ ಹಾಗೂ ಇತರ ಜಿಲ್ಲೆ ಗಳಿಂದ ಬಡವರು, ಕನ್ನಡ ಮಾತನಾಡುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಕೆಲವೊಂದು ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು,
ಇಂಟರ್ನ್ಗಳು ಕನ್ನಡದಲ್ಲಿ ವ್ಯವಹರಿಸದೇ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಕೆಲವೊಂದು ವೈದ್ಯರು ಹಾಗೂ ವಿದ್ಯಾರ್ಥಿಗಳು ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಕರಿಗೆ
ಚಿಕಿತ್ಸಾ ವಿಧಾನ ಮತ್ತು ಪ್ರಗತಿಯ ಮಾಹಿತಿ ತಿಳಿಸದೇ ಇರುವುದು ಗಮನಕ್ಕೆ ಬಂದಿದ್ದು,ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆ ವೆಸ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು.
ಹೊರರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 3 ತಿಂಗಳ ಒಳಗೆ ಕನ್ನಡ ಕಲಿಯಬೇಕು. ಅಲ್ಲಿಯವರೆಗೆ ರೋಗಿಗಳೊಂದಿಗೆ ವ್ಯವಹರಿಸಲು ಸದರಿ ವಿಭಾಗಗಳಲ್ಲಿರುವ ಇತರ ಸಿಬಂದಿಯ ಸಹಾಯ ಪಡೆಯುವಂತೆ ಅವರು ಸೂಚಿಸಿದ್ದಾರೆ




