ಉಪ್ಪಳ: ಕೈಕಂಬ ಪೇಟೇಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಬೃಹತ್ ಹೊಂಡ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.


ವ್ಯಾಪಾರ ಸಂಸ್ಥೆಗಳು ಹೊಂದಿರುವ ಈ ಪ್ರದೇಶದಲ್ಲಿ ದಿನನಿತ್ಯ ಜನರ ಸಂಚಾರವಿದ್ದು ರಾತ್ರಿ ಹೊತ್ತಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸಬಹುದಾಗಿದೆ.
ಒಂದು ತಿಂಗಳ ಹಿಂದೆ ಹೊಂಡ ತೋಡಲಾಗಿದೆ. ವಿದ್ಯುತ್ ಕೇಬಲ ಅಳವಡಿಸಲಾದರೂ ಮುಚ್ಚದೆ ಬಿಟ್ಟಿರುವುದು ಅಧಿಕೃತರ ನಿರ್ಲಕ್ಷ್ಯವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಂಡದಿಂದ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳು ಸಮಸ್ಯೆ ಉಂಟಾಗುತ್ತಿರುವುದಾಗಿಯೂ ದೂರಲಾಗಿದೆ.
ಕಳೆದ ಎರಡು ದಿನಗಳಿಂದ ಮಳೆ ಆರಂಭಗೊಂಡಿದ್ದು, ನೀರು ತುಂಬಿಕೊಂಡಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬುದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಹೊಂಡವನ್ನು ಮುಚ್ಚಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




