ಪತ್ನಿಯ ಮುಂದೆ ಅವಮಾನ ಮಾಡಿದರೆಂದು ಹೆತ್ತ ತಂದೆ–ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಮಗ..!

Share with

ಮುಂಬೈ: ಪತ್ನಿಯ ಮುಂದೆ ಪೋಷಕರು ಅವಮಾನ ಮಾಡಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ರೊಚ್ಚಿಗೆದ್ದ ಮಗನೊಬ್ಬ ತನ್ನ ಹೆತ್ತ ತಂದೆ-ತಾಯಿಯನ್ನೇ ಕುಟ್ಟಾಣಿಯಿಂದ (Pestle) ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ.

ರಂಜುದೇವಿ ಮಹತೋ (52) ಮತ್ತು ಇಂದಾರಾಮ್ ಮಹತೋ (58) ಮೃತ ದುರ್ದೈವಿಗಲಾಗಿದ್ದು, ಚಂದನ್ ಇಂದಾರಾಮ್ ಮಹತೋ (28) ಆರೋಪಿಯಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಂಜುದೇವಿ ಮತ್ತು ಇಂದಾರಾಮ್ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರಳಿದ್ದರು. ಈ ವೇಳೆ ಮಗ ಚಂದನ್ ನನ್ನು ಪತ್ನಿಯ ಎದುರೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆತನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಹೆಂಡತಿಯ ಮುಂದೆ ಪೋಷಕರು ತನ್ನನ್ನು ನಿಂದಿಸಿದ್ದರಿಂದ ತೀವ್ರ ಆಕ್ರೋಶಗೊಂಡ ಚಂದನ್, ಮನೆಯಲ್ಲಿದ್ದ ಕುಟ್ಟಾಣಿಯನ್ನು ತೆಗೆದುಕೊಂಡು ತಂದೆ ಮತ್ತು ತಾಯಿ ಇಬ್ಬರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವಗೊಂಡ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇತ್ತ ಕೃತ್ಯ ಎಸಗಿದ ಬಳಿಕ ಆರೋಪಿ ಚಂದನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿರ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


Share with

Leave a Reply

Your email address will not be published. Required fields are marked *