ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ಮನೆ ಪಂಚಾಂಗ ನಿರ್ಮಾಣದ ವಿವಾದ ಅಂತ್ಯ

Share with

ಅರಣ್ಯ ಇಲಾಖಾಧಿಕಾರಿಗಳನ್ನು ಜನಪ್ರತಿನಿಧಿಗಳು ಜಂಟಿ ಸರ್ವೇ ಮಾಡಲು ಒಪ್ಪಿಸುವ ಮೂಲಕ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ವಿವಾದ ಅಂತ್ಯಗೊಂಡಿತು.

ಬೆಳ್ತಂಗಡಿ: ಅರಣ್ಯ ಇಲಾಖಾಧಿಕಾರಿಗಳನ್ನು ಜನಪ್ರತಿನಿಧಿಗಳು ಜಂಟಿ ಸರ್ವೇ ಮಾಡಲು ಒಪ್ಪಿಸುವ ಮೂಲಕ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ವಿವಾದ ಅಂತ್ಯಗೊಂಡಿತು.

ಇಲಾಖಾಧಿಕಾರಿಯವರಿಗೂ ಶಾಸಕರಿಗೂ ತೀವ್ರ ಮಾತಿನ ವಾಗ್ಯುದ್ಧ ನಡೆದಿತ್ತು.

ಅ.7ರಂದು ಅಮ್ಮಿನಡ್ಕದಲ್ಲಿ ಲೋಲಾಕ್ಷ ಎಂಬುವರು ಮನೆಗಾಗಿ ಪಂಚಾಂಗ ನಿರ್ಮಿಸಿದ್ದನ್ನು ಅರಣ್ಯ ಇಲಾಖೆಯವರು ಯಾವುದೇ ಪೂರ್ವ ಸೂಚನೆ ಇಲ್ಲದೆ ಕಿತ್ತು ಬಿಸಾಡಿದ್ದರು. ಇದನ್ನು ತಿಳಿದ ಶಾಸಕ ಹರೀಶ ಪೂಂಜ ಅವರು ಸ್ಥಳಕ್ಕೆ ದೌಡಾಯಿಸಿ ಮನೆ ನಿರ್ಮಿಸುವಂತೆ ಸೂಚಿಸಿದ್ದರು. ಈ ಸಂದರ್ಭ ಇಲಾಖಾಧಿಕಾರಿಯವರಿಗೂ ಶಾಸಕರಿಗೂ ತೀವ್ರ ಮಾತಿನ ವಾಗ್ಯುದ್ಧ ನಡೆದಿತ್ತು. ಸರ್ವೇ ಆಗದೆ ಮನೆ ತೆರವು ಮಾಡಲಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಚಿವ ಈಶ್ವರ ಖಂಡ್ರೆಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಸಚಿವರು ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ಸೂಚಿಸಿದ್ದರು. ಈ ಮಧ್ಯೆ ಆದಿತ್ಯವಾರ ಇಲಾಖೆಯವರು ಕರ್ತವ್ಯಕ್ಕೆ ಅಡ್ಡಿ ಹಿನ್ನಲೆಯಲ್ಲಿ ಅಲ್ಲಿನ 11 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದರು.

ಇಷ್ಟೆಲ್ಲಾ ಆದ ನಂತರವೂ ಅರಣ್ಯ ಇಲಾಖೆ ಸೋಮವಾರ ಮುಂಜಾನೆ ನೂರಾರು ಸಿಬ್ಬಂದಿಗಳ ದಂಡಿನೊಂದಿಗೆ ತನ್ನ ದರ್ಪ ತೋರಿಸಲು ಸಿದ್ದವಾಯಿತಲ್ಲದೆ ನಿರ್ಮಾಣ ಹಂತದಲ್ಲಿದ್ದ ಮನೆಯನ್ನು ಕಿತ್ತೆಸೆಯಲು ಮುಂದಾಯಿತು. ಇದನ್ನರಿತ ಶಾಸಕ ಪೂಂಜಾ ಅವರು ಮುಂಜಾನೆಯೇ ಸ್ಥಳಕ್ಕೆ ಧಾವಿಸಿ ಮಾನವ ಸರಪಳಿ ರಚಿಸಿ ಮನೆ ತೆರವಿಗೆ ತಡೆಯೊಡ್ಡಿದರು. ಈ ಸಂದರ್ಭ ಶಾಸಕರುಗಳಾದ ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಪ್ರತಾಪಸಿಂಹ ನಾಯಕ್ ಸಾಥ್ ನೀಡುದರು. ಈ ವೇಳೆ ತೀವ್ರವಾದ ಮಾತಿನ ಚಕಮಕಿ ಪುತ್ತೂರು ಎ.ಸಿ.ಎಫ್.ಸುಬ್ಬಯ್ಯ ನಾಯ್ಕ ಅವರೊಂದಿಗೆ ನಡೆಯಿತು. ನಾಯ್ಕ ಅವರು ಜನಪ್ರತಿನಿಧಿಗಳಿಗೆ ಕಿಂಚಿತ್ ಗೌರವವನ್ನೂ ಕೊಡದೆ, ಅವರ ಮಾತನ್ನೂ ಆಲಿಸದೆ ಯಾರದೊ ಒತ್ತಡಕ್ಕೆ ಒಳಗಾದವರಂತೆ ವರ್ತಿಸಿದರಲ್ಲದೆ ಒಂದು ಹಂತದಲ್ಲಿ ಪ್ರತಾಪಸಿಂಹ ನಾಯಕರ ಮೇಲೆ ಏರಿ ಬಂದರು. ಅಲ್ಲದೆ ಅವರು ಬಂಧಿಸಿ ಎಂದೂ ಕೂಗಾಡಿದರು. ಈ ಸಂದರ್ಭ ವಾತಾವರಣ ಇನ್ನಷ್ಟು ಉದ್ವಿಗ್ನಗೊಂಡಿತು.

ಶಾಸಕರುಗಳು ಜಂಟಿ ಸರ್ವೆಗೆ ಎಷ್ಟೇ ಒತ್ತಾಯಿಸಿದರೂ ಅಧಿಕಾರಿಗಳು ಒಪ್ಪದೇ ಇರುವುದು ಸಮಸ್ಯೆ ಇನ್ನಷ್ಟು ಕಗ್ಗಂಟಾಯಿತು. ನಾಯ್ಕ ಅವರು ಸರ್ವೆಗೆ ಒಪ್ಪದಿರುವುದು ಎಲ್ಲರಿಗೂ ಒಗಟಾಗಿ ಕಂಡಿತು. ಕೊನೆಗೆ ಶಾಸಕ ಪೂಂಜಾ ಅವರು ಜಿಲ್ಲಾ ಅರಣ್ಯಾಧಿಕಾರಿ ವೆಲಂಟನಿ ಮರಿಯಪ್ಪ ಅವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಪರಿಸ್ಥಿತಿಯ ಮನವರಿಕೆ ಮಾಡಲು ಪ್ರಯತ್ನಿಸಿದರಾದರೂ ಅವರೂ ಯಾರದೋ ಪ್ರಭಾವಕ್ಕೆ ಒಳಗಾದವರಂತೆ ಮಾತನಾಡತೊಡಗಿದರು. ಇದರಿಂದ ಕೆರಳಿದ ಪೂಂಜ ಅವರು ಸ್ಥಳಕ್ಕೆ ಬರುವ ತನಕ ಕದಲುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.

ಇಷ್ಟು ಹೊತ್ತಿಗೆ ಪ್ರತಿಭಟನೆಗೆ ಶಾಸಕ ಭರತ್ ಶೆಟ್ಟಿ, ಉಮಾನಾಥ ನಾಯಕ್, ಪುತ್ತೂರಿನ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ಹಿರಿಯರಾದ ಕುಶಾಲಪ್ಪ ಗೌಡ ಸೇರಿಕೊಂಡರು. ಮಧ್ಯಾಹ್ನದ ವೇಳೆಗೆ ಜಿಲ್ಲಾ ಅರಣ್ಯಾಧಿಕಾರಿ ಬಾಲಿವುಡ್ ಸಿನಿಮಾ ಶೈಲಿಯಲ್ಲಿ ಪೋಲಿಸ್ ಬೆಟಾಲಿಯನ್ ಮೂಲಕ ಸುತ್ತುವರಿದುಕೊಂಡು ಸಮವಸ್ತ್ರ ಹಾಕದೆ ಸ್ಥಳಕ್ಕೆ ಆಗಮಿಸಿದರು. ಈ ದೃಶ್ಯವನ್ನು ನೋಡಿದ ಅಲ್ಲಿನ ನಾಗರಿಕರು ಒಂದು‌ ಕ್ಷಣ ಆತಂಕಿತರಾದರು. ಇನ್ನೇನು ಇಲ್ಲಿ ರಣರಂಗವೇ ಆಗಲಿದೆಯೆಂಬ ವಾತಾವರಣ ಮೂಡಿತ್ತು. ಬಂದ ಕೂಡಲೆ ಅವರೂ ಮನೆ ತೆರವುಗೊಳಿಸುವುದಾಗಿ ತಿಳಿಸಿದಾಗ, ಎಲ್ಲಾ ಶಾಸಕರುಗಳು, ತೆರವುಗೊಳಿಸುವುದಾದರೆ 309 ಸರ್ವೇ ನಂಬರ್ ಗೆ ಒಳಪಟ್ಟ ಎಲ್ಲ ಮನೆ ತೆರವುಗೊಳಿಸಿ, ಇಲ್ಲವೇ ಕಂದಾಯ, ಅರಣ್ಯ ಜಂಟಿ ಸರ್ವೇ ನಡೆಸಿ ಎಲ್ಲರಿಗೂ ಹಕ್ಕುಪತ್ರ ನೀಡಿ. ಬಡವರಿಗೊಂದು ನ್ಯಾಯ ಸಿರಿವಂತರಿಗೊಂದು ನ್ಯಾಯ ಬೇಡ ಎಂದು ಊರವರ ಜತೆಗೂಡಿ ಪಟ್ಟು ಹಿಡಿದರು.

ಬಳಿಕ ವಿಚಾರ ಗಂಭೀರ ಸ್ವರೂಪ ಪಡೆಯುತ್ತಲೆ, ಡಿ.ಸಿ.ಎಫ್, ಎ.ಸಿ.ಎಫ್., ಆರ್.ಎಫ್.ಒ. ಘಟನೆ ಕುರಿತು ವಿಶ್ಲೇಷಿಸಿ, ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ, ತಹಶೀಲ್ದಾರ್ ಅವರ ಸಲಹೆ ಪಡೆದರು. ಬಳಿಕ ಆಗಮಿಸಿದ ಡಿ.ಸಿ.ಎಫ್. ಮನೆಮಂದಿ ಹಾಗೂ ಶಾಸಕರಲ್ಲಿ ಮಾತುಕತೆ ನಡೆಸಿ, 309 ಸರ್ವೇ ನಂಬರ್ ಗೆ ಒಳಪಟ್ಟಂತೆ ಸುಮಾರು 6000 ಕ್ಕೂ ಅಧಿಕ ಎಕ್ರೆ ಭೂಮಿಯಿದೆ. ಅರಣ್ಯ ಹಾಗೂ ಕಂದಾಯ ಜಂಟಿ ಸರ್ವೇ ನಡೆಸಿದ ಬಳಿಕ ಮನೆ ತೆರವಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಮಾತ್ರವಲ್ಲದೆ ಸದ್ಯ ಮನೆ ಯಥಾಸ್ಥಿತಿಯಲ್ಲಿ ಇರಿಸಬೇಕು, ಜಂಟಿ ಸರ್ವೇ ನಡೆಸುವವರೆಗೆ ಮನೆ ಮರು ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಕಾಮಗಾರಿ ನಡೆಸುವುದಿಲ್ಲ. ಒಂದು ವೇಳೆ ಮನೆ ಪ್ರದೇಶ ಅರಣ್ಯ ಎಂದಾದಲ್ಲಿ ತಾವೇ ನಿಂತು ತೆರವುಗೊಳಿಸುವುದಾಗಿ ಶಾಸಕ ಹರೀಶ್ ಪೂಂಜ ಅವರಿಂದ ಡಿ.ಸಿ.ಎಫ್. ಅವರು ಲಿಖಿತ ಹೇಳಿಕೆ ಬರೆಸಿಕೊಂಡರು. ಅಲ್ಲಿಗೆ ಪ್ರಕರಣ ಒಂದು ಹಂತಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದೆ. ಮುಂದೆ ಸರ್ವೇ ಕಾರ್ಯ ನಡೆಸಿ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಡಿ.ಸಿ.ಎಫ್. ಭರವಸೆ ನೀಡಿದರು.


Share with

Leave a Reply

Your email address will not be published. Required fields are marked *