ಪುತ್ತೂರು .ಆ.14. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಗಳ ಪದವಿ ಕಾಲೇಜಿನಲ್ಲಿ ವಾಗ್ವೈಭವ ಸಂಸ್ಕೃತ ಸಂಘ ದ ವಾರ್ಷಿಕ ಚಟುವಟಿಕೆಗಳ ಮತ್ತು ಶ್ರೀ ಸುರಸರಸ್ವತೀ ಸಭಾದ ಸಂಸ್ಕೃತ ಪ್ರಥಮಾ ತರಗತಿಯ ಉದ್ಘಾಟನಾ ಸಮಾರಂಭವು ಐಕ್ಯೂಎಸಿ ಸಹಯೋಗದಲ್ಲಿ ಇಂದು ಕಾಲೇಜಿನ ಅಕ್ಷಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ರಮೇಶ ಆಚಾರ್ಯರು ಉದ್ಘಾಟಿಸಿ , ” ಸಂಸ್ಕೃತ ಎನ್ನುವುದು ಕೇವಲ ಒಂದು ಭಾಷೆಯಲ್ಲ. ವೇದ , ಉಪನಿಷತ್ತು , ಯೋಗ , ವಿಜ್ಞಾನ , ಸಾಹಿತ್ಯ , ಸುಭಾಷಿತಗಳ ಸಮೃದ್ಧ ಜ್ಞಾನವು ಅಂತರ್ಗತವಾದ ಭಾರತದ ಜ್ಞಾನ ಭಂಡಾರದ ಕೀಲಿಕೈ. ‘ ಸಂಸ್ಕೃತಿಃ ಸಂಸ್ಕೃತಾಶ್ರಿತಃ ‘ ಎನ್ನುವ ನುಡಿಯಂತೆ ಭಾರತದ ಸನಾತನ ಸಂಸ್ಕೃತಿಯನ್ನು ಅರಿಯಲು ಎಲ್ಲರೂ ಸಂಸ್ಕೃತವನ್ನು ಕಲಿತು , ಪ್ರಾಚೀನ ಭಾಷೆಯನ್ನು ಉಳಿಸಿ ಬೆಳೆಸಬೇಕು ” ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಸುರಸರಸ್ವತೀ ಸಭಾದ ಸಂಸ್ಕೃತ ಪ್ರಥಮಾ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿ ತರಗತಿಗೆ ಚಾಲನೆ ನೀಡಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ .ಕೆ. ಪಕ್ಕಳ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ಅಕ್ಷಯ ಕಾಲೇಜು ಸಂಸ್ಕೃತ ಭಾಷೆಗೆ ಸದಾ ಗೌರವ , ಪ್ರೋತ್ಸಾಹ ವನ್ನು ನೀಡುತ್ತದೆ. ಕಾಲೇಜಿನ ವಾಗ್ವೈಭವ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆಯುವ ಸಂಸ್ಕೃತ ಪ್ರಥಮಾ ತರಗತಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಸೇರುವುದರ ಮೂಲಕ ಸಂಸ್ಕೃತ ಕಲಿಕೆಯ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಕೃತ ವಿಭಾಗ ಪ್ರಮುಖರಾದ ಶ್ರೀಮತಿ ಸಾಯಿಕೃಪಾ. ಕೆ. ಪ್ರಾಸ್ತಾವಿಕ ನುಡಿಯನ್ನಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ .ಟಿ. ಎ. ಮತ್ತು ಐಕ್ಯೂಎಸಿ ಸಂಯೋಜಕಿ ಶ್ರೀಮತಿ ರಶ್ಮಿ .ಕೆ. ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಕು. ಯಶಸ್ವಿ .ಬಿ.ಕೆ. ಮತ್ತು ರಶ್ಮಿ ರಾವ್ ಪ್ರಾರ್ಥಿಸಿ , ಸಂಸ್ಕೃತ ಸಂಘದ ಕಾರ್ಯದರ್ಶಿ ದ್ವಿತೀಯ ಕಲಾವಿಭಾಗದ ಕು.ಶ್ರೇಯಾ ಸ್ವಾಗತಿಸಿ , ಪ್ರಥಮ ಕಲಾವಿಭಾಗದ ಕು. ದೀಕ್ಷಾ ವಂದಿಸಿದ ಈ ಕಾರ್ಯ ಕ್ರಮವನ್ನು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹಾಗೂ ಸಂಸ್ಕೃತ ಸಂಘದ ಸಂಯೋಜಕಿ ಶ್ರೀಮತಿ ಶಶಿಕಲಾ. ಎಸ್. ನಿರೂಪಿಸಿದರು.





