ಉಡುಪಿ: ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಯುವಕನನ್ನು ಹತ್ಯೆಗೈದ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ.
![ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಯುವಕನನ್ನು ಹತ್ಯೆಗೈದ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ.](https://i0.wp.com/veekshakavani.com/wp-content/uploads/2024/03/ಉಡುಪಿ-ಜಿಲ್ಲಾ-ಪೊಲೀಸ್-ವರಿಷ್ಠಾಧಿಕಾರಿ-ಡಾ.ಅರುಣ್-ಕೆ-ಭೇಟಿ-ನೀಡಿ-ಪರಿಶೀಲನೆ-.jpg?resize=640%2C400&ssl=1)
ಮೃತ ಯುವಕನನ್ನು ಕೃಷ್ಣ(36) ಎಂದು ಗುರುತಿಸಲಾಗಿದೆ. ಮಾ.2ರಂದು ರಾತ್ರಿ ಘಟನೆ ನಡೆದಿದ್ದು, ಮಾ.3ರಂದು ಮುಂಜಾನೆ ಬೆಳಕಿಗೆ ಬಂದಿದೆ. 2ರಂದು ರಾತ್ರಿ 9:30 ಸುಮಾರಿಗೆ ಕೃಷ್ಣ ಅವರು ಮನೆಯಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಮನೆಗೆ ದಾಳಿ ನಡೆಸಿದ ದುಷ್ಕರ್ಮಿಗಳ ತಂಡವು ಕೃಷ್ಣ ಅವರ ಮೇಲೆ ಫೈರಿಂಗ್ ನಡೆಸಿದೆ. ಬಳಿಕ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರು, ಮನೆಯಲ್ಲಿ ಏಕಾಂಗಿಯಾಗಿ ವಾಸಮಾಡಿಕೊಂಡಿದ್ದರು. ಘಟನೆ ನಡೆಯುವ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಯವರು ಪಟಾಕಿಯ ಶಬ್ದವೆಂದು ಸುಮ್ಮನೆ ಕುಳಿತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.