
ಪುತ್ತೂರು: ಮಂಗಳೂರಿನಿಂದ ಸುಳ್ಯದ ಕಡೆಗೆ ಪಾಮ್ ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪುತ್ತೂರಿನ ಬೈಪಾಸ್ ರಸ್ತೆ ಉರ್ಲಂಡಿ ಬಳಿ ಪಲ್ಟಿಯಾಗಿ ಪಾಮ್ ಆಯಿಲ್ ಸೋರಿಕೆಯಾಗಿ ರಸ್ತೆಯಲ್ಲೆಲ್ಲಾ ಹರಿದು ಹೋದ ಘಟನೆ ಅ.18ರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದು, ಟ್ಯಾಂಕರ್ ಉರುಳಿ ಬಿದ್ದ ತಕ್ಷಣ ಸ್ಥಳೀಯರು ಆಗಮಿಸಿ, ಇತರರಿಗೆ ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದರು.
ಘಟನೆಯಿಂದ ವಿದ್ಯುತ್ ತಂತಿ ತುಂಡರಿಸಲ್ಪಟ್ಟಿದ್ದು ಸಂಪರ್ಕ ಕಡಿತಗೊಂಡಿದೆ. ಟ್ಯಾಂಕರ್ ವಿದ್ಯುತ್ ಕಂಬ, ತಂತಿಗಳಿಗೆ ತಾಗಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಚಾಲಕನನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.